ಬೆಂಗಳೂರು: ಚಿಕ್ಕಜಾಲ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ರೌಡಿ ಸುಬ್ರಹ್ಮಣ್ಯ (30) ಎಂಬಾತನ ಕೊಲೆ ಸಂಬಂಧ ಆರೋಪಿ ಗಜ (30) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
‘ಸ್ಥಳೀಯ ನಿವಾಸಿಯಾದ ಸುಬ್ರಹ್ಮಣ್ಯ, ಶುಕ್ರವಾರ (ಜೂನ್ 26) ಸಂಜೆ 6 ಗಂಟೆ ಸುಮಾರಿಗೆ ಮೀನುಕುಂಟೆ ಹೊಸೂರು ಬಳಿ ಹೊರಟಿದ್ದ. ಅದೇ ವೇಳೆ ಬೈಕ್ನಲ್ಲಿ ಬಂದ ದುಷ್ಕರ್ಮಿಗಳ ತಂಡ, ಆತನ ಮೇಲೆ ದಾಳಿ ಮಾಡಿ ಕೊಲೆ ಮಾಡಿತ್ತು’ ಎಂದು ಪೊಲೀಸರು ಹೇಳಿದರು.
‘ಕೊಲೆ, ಕೊಲೆ ಯತ್ನ, ಸುಲಿಗೆ ಸೇರಿದಂತೆ 10ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಸುಬ್ರಹ್ಮಣ್ಯ, ಹಲವು ಬಾರಿ ಜೈಲಿಗೂ ಹೋಗಿ ಬಂದಿದ್ದ. ಆರೋಪಿ ಗಜ ಜೊತೆ ಗಲಾಟೆ ಮಾಡಿಕೊಂಡಿದ್ದ. ಗಜನನ್ನು ಹೊಡೆಯುವುದಾಗಿ ಸುಬ್ರಹ್ಮಣ್ಯ, ಸ್ನೇಹಿತರ ಬಳಿ ಹೇಳಿ
ಕೊಂಡು ಓಡಾಡುತ್ತಿದ್ದ. ಅದು ಗೊತ್ತಾಗುತ್ತಿದ್ದಂತೆ ಆರೋಪಿ ಗಜ, ತನ್ನ ಸಹಚರರ ಜೊತೆ ಸೇರಿ ಈ ಕೊಲೆ ಮಾಡಿದ್ದಾನೆ. ಈ ಬಗ್ಗೆ
ಆತ ತಪ್ಪೊಪ್ಪಿಕೊಂಡಿದ್ದಾನೆ. ಪ್ರಕರಣದಲ್ಲಿ ಮತ್ತಷ್ಟು ಆರೋಪಿಗಳು ಶಾಮೀಲಾಗಿದ್ದು, ಅವರು ತಲೆಮರೆಸಿಕೊಂಡಿದ್ದಾರೆ’ ಎಂದೂ ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.