ಬೆಂಗಳೂರು: ಮೈಸೂರು ರೇಸ್ ಕ್ಲಬ್ಗೆ ನೀಡಿದ್ದ 140 ಎಕರೆ ಜಾಗದ ಗುತ್ತಿಗೆ ಅವಧಿಯನ್ನು ವಿಸ್ತರಿಸಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ವಕೀಲ ಎಸ್. ಉಮಾಪತಿ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
‘139 ಎಕರೆ 39 ಗುಂಟೆ ಜಾಗದಲ್ಲಿ ಸ್ವಲ್ಪ ಭಾಗವನ್ನು ಜಯಚಾಮರಾಜೇಂದ್ರ ಗಾಲ್ಫ್ ಕ್ಲಬ್ಗೂ ನೀಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಹೀಗೆ ಮಾಡುವುದರಿಂದ ಗಾಲ್ಫ್ ಕ್ಲಬ್ಗೆ ಅನುಕೂಲವಾಗಿದೆ. ಕ್ಲಬ್ ನಷ್ಟಕ್ಕೆ ಸಿಲುಕಿದೆ ಎಂದು ಹೇಳಿಕೊಂಡರೆ ಬಾಡಿಗೆ ವಸೂಲಿ ಹೇಗೆ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ಪೀಠ ತಿಳಿಸಿತು.
‘ಮೈಸೂರು ನಗರದ ಕುರುಬರಹಳ್ಳಿ ಗ್ರಾಮದ ಸರ್ವೆ ನಂಬರ್ 4 ಮತ್ತು 74ರಲ್ಲಿ 139 ಎಕರೆ 39 ಗುಂಟೆ ಭೂಮಿಯನ್ನು 1970ರಲ್ಲಿ ಮೈಸೂರು ರೇಸ್ ಕ್ಲಬ್ಗೆ ಗುತ್ತಿಗೆಗೆ ನೀಡಲಾಗಿತ್ತು. ಕಾಲಕಾಲಕ್ಕೆ ಗುತ್ತಿಗೆ ನವೀಕರಣಗೊಂಡು 2016ರಲ್ಲಿ ಮುಕ್ತಾಯಗೊಂಡಿದೆ. ಅಂದಿನಿಂದ ಗುತ್ತಿಗೆ ನವೀಕರಿಸದೆ ಜಾಗವನ್ನು ರೇಸ್ ಕ್ಲಬ್ ಅಕ್ರಮವಾಗಿ ಆಕ್ರಮಿಸಿಕೊಂಡಿತ್ತು’ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
‘ಮಾರುಕಟ್ಟೆ ಮೌಲ್ಯಕ್ಕೆ ಅನುಗುಣವಾಗಿ ಬಾಡಿಗೆ ನಿಗದಿ ಮಾಡಿಲ್ಲ. ಕ್ಲಬ್ನ ವಾರ್ಷಿಕ ವರಮಾನದ ಶೇ 2ರಷ್ಟು ಬಾಡಿಗೆ ನಿಗದಿ ಮಾಡಲಾಗಿದೆ. 30 ವರ್ಷಗಳ ಅವಧಿಗೆ ಅಂದರೆ 2046 ರವರೆಗೆ ಕಾನೂನುಬಾಹಿರವಾಗಿ ಗುತ್ತಿಗೆ ಅವಧಿ ವಿಸ್ತರಿಸಲಾಗಿದೆ’ ಎಂದು ಅರ್ಜಿದಾರರು ದೂರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.