ADVERTISEMENT

ನಲಪಾಡ್‌ ಪ್ರಕರಣ ಮತ್ತೆ ಸೆಷನ್ಸ್ ಅಂಗಳಕ್ಕೆ

ಜಾಮೀನು ಷರತ್ತು ಸಡಿಲಿಕೆ: ನಲಪಾಡ್‌ ಅರ್ಜಿ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2018, 18:56 IST
Last Updated 27 ಆಗಸ್ಟ್ 2018, 18:56 IST
ನಲಪಾಡ್‌
ನಲಪಾಡ್‌   

ಬೆಂಗಳೂರು: ‘ವಿದೇಶ ಪ್ರವಾಸಕ್ಕೆ ತೆರಳಲು ಅನುವಾಗುವಂತೆ ನನ್ನ ಜಾಮೀನು ಷರತ್ತುಗಳನ್ನು ಸಡಿಲಿಸಿ’ ಎಂದು ಮೊಹಮದ್ ನಲಪಾಡ್‌ ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್, ಸೆಷನ್ಸ್ ನ್ಯಾಯಾಲಯದ ಅಂಗಳಕ್ಕೆ ತಳ್ಳಿದೆ.

ಉದ್ಯಮಿ ಲೋಕನಾಥ್‌ ಪುತ್ರ ವಿದ್ವತ್ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಶಾಸಕ ಎನ್.ಎ.ಹ್ಯಾರಿಸ್ ಪುತ್ರ ಮೊಹಮದ್‌ ನಲಪಾಡ್‌ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ನಲಪಾಡ್‌ ಪರ ಹಾಜರಿದ್ದ ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್‌ ಜಾಮೀನು ಷರತ್ತು ಸಡಿಲಿಸುವಂತೆ ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಈ ಕುರಿತ ಅರ್ಜಿಯನ್ನು ಅಧೀನ ನ್ಯಾಯಾಲಯದಲ್ಲಿಯೇ ಸಲ್ಲಿಸಿ ಪರಿಹಾರ ಪಡೆಯಿರಿ’ ಎಂದು ಆದೇಶಿಸಿತು.

ADVERTISEMENT

ಏನು ಮನವಿ ?: ‘ನನ್ನ ತಮ್ಮ ಲಂಡನ್‌ನಲ್ಲಿ ಇದ್ದಾನೆ‌. ಆತನನ್ನು ಭೇಟಿ ಮಾಡುವುದಕ್ಕಾಗಿ 15 ದಿನಗಳ ಕಾಲ ಬ್ರಿಟನ್‌ಗೆ ತೆರಳಲು ಉದ್ದೇಶಿಸಿದ್ದೇನೆ. ಆದ್ದರಿಂದ ಜಾಮೀನು ಷರತ್ತು ಸಡಿಲಿಸಿ’ ಎಂದು ನಲಪಾಡ್ ಹೈಕೋರ್ಟ್‌ಗೆ ಮನವಿ ಮಾಡಿದ್ದರು.

2018ರ ಫೆಬ್ರುವರಿ 17ರಂದು ರಾತ್ರಿ ಮೊಹಮದ್ ನಲಪಾಡ್ ಮತ್ತು ಅವರ ಸಹಚರರು ನಗರದ ಫರ್ಜಿ ಕಫೆಯಲ್ಲಿ ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿದ್ದಾರೆ.

ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ನಲಪಾಡ್‌ 116 ದಿನಗಳನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಳೆದಿದ್ದರು. ಇವರಿಗೆ ಹೈಕೋರ್ಟ್‌ ಜೂನ್ 14ರಂದು ಷರತ್ತು ಬದ್ಧ ಜಾಮೀನು ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.