ADVERTISEMENT

ಬೆಂಗಳೂರಿನಲ್ಲಿ ಏಕಕಾಲಕ್ಕೆ 108 ಕಡೆ ಕ್ಲಿನಿಕ್‌ಗಳು ಶುರು

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2023, 21:24 IST
Last Updated 7 ಫೆಬ್ರುವರಿ 2023, 21:24 IST
‘ನಮ್ಮ ಕ್ಲಿನಿಕ್‌’ ಉದ್ಘಾಟಿಸಿದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವೈದ್ಯಕೀಯ ಉಪಕರಣಗಳನ್ನು ವೀಕ್ಷಿಸಿದರು. ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮತ್ತು ಅಬಕಾರಿ ಸಚಿವ ಕೆ.ಗೋಪಾಲಯ್ಯ ಇದ್ದರು
‘ನಮ್ಮ ಕ್ಲಿನಿಕ್‌’ ಉದ್ಘಾಟಿಸಿದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವೈದ್ಯಕೀಯ ಉಪಕರಣಗಳನ್ನು ವೀಕ್ಷಿಸಿದರು. ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮತ್ತು ಅಬಕಾರಿ ಸಚಿವ ಕೆ.ಗೋಪಾಲಯ್ಯ ಇದ್ದರು   

ಬೆಂಗಳೂರು: ಬಡ, ಮಧ್ಯಮ ಮತ್ತು ಕೊಳೆಗೇರಿ ವಾಸಿಗಳಿಗೆ ಒಂದೇ ಸೂರಿನಡಿ ಎಲ್ಲ ರೀತಿಯ ಆರೋಗ್ಯ ಸೇವೆಗಳನ್ನು ನೀಡುವ ‘ನಮ್ಮ ಕ್ಲಿನಿಕ್‌’ ಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ಉದ್ಘಾಟಿಸಿದರು.

ಮಹಾಲಕ್ಷ್ಮೀ ಲೇಔಟ್‌ನ ರಾಣಿ ಅಬ್ಬಕ್ಕದೇವಿ ಆಟದ ಮೈದಾನದಲ್ಲಿ ಬಿಬಿಎಂಪಿ ವ್ಯಾಪ್ತಿಯ ಒಟ್ಟು 108 ‘ನಮ್ಮ ಕ್ಲಿನಿಕ್‌’ಗಳಿಗೆ ಏಕಕಾಲಕ್ಕೆ ಚಾಲನೆ ನೀಡಿದ ಅವರು, ‘ನಮ್ಮ ಕ್ಲಿನಿಕ್‌ ಒಂದು ಕ್ರಾಂತಿಕಾರಿ ಹೆಜ್ಜೆ’ ಎಂದು
ವ್ಯಾಖ್ಯಾನಿಸಿದರು.

‘ನೆಗಡಿ, ಕೆಮ್ಮು, ರಕ್ತದೊತ್ತಡ, ಮಧುಮೇಹ ಸೇರಿ ಹಲವು ರೀತಿಯ ಕಾಯಿಲೆಗಳ ತಪಾಸಣೆ ಮಾಡುವುದರ ಜತೆಗೆ ಔಷಧಿಗಳನ್ನೂ ವಿತರಿಸಲಾಗುವುದು. ಇಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಟೆಲಿ ಮೆಡಿಸಿನ್‌ ಸೌಲಭ್ಯವನ್ನು ಒದಗಿಸಲಾಗುವುದು. ಪರಿಣಿತರ ಜತೆಗೆ ಟೆಲಿ ಸಂವಾದ ನಡೆಸಿ ಉಪಚಾರ ನೀಡಲಾಗುವುದು. ಇದರಿಂದ ಸಾಮಾನ್ಯ ಜನರ ಆರೋಗ್ಯ ಸೇವೆಯನ್ನು ಇನ್ನಷ್ಟು ಗಟ್ಟಿಗೊಳಿಸಬಹುದು. ಕಳೆದ ಬಜೆಟ್‌ನಲ್ಲಿ
ನೀಡಿದ ಭರವಸೆ ಈಡೇರಿದೆ’ ಎಂದು ಹೇಳಿದರು.

ADVERTISEMENT

‘ಆರೋಗ್ಯದ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮದು ಸೂಕ್ಷ್ಮತೆ ಹೊಂದಿರುವ ಸರ್ಕಾರ. ಡಯಾಲಿಸಿಸ್‌ ಪ್ರಮಾಣ ದಿನವೊಂದಕ್ಕೆ 30 ಸಾವಿರ ಇದ್ದುದ್ದನ್ನು 60 ಸಾವಿರಕ್ಕೆ ಏರಿಸಲಾಗಿದೆ. ಕೀಮೋಥೆರಪಿ ಚಿಕಿತ್ಸೆಗಳನ್ನು 30 ಸಾವಿರದಿಂದ 60 ಸಾವಿರಕ್ಕೆ ಏರಿಸಿ 12 ಹೊಸ ಕೇಂದ್ರಗಳನ್ನು ತೆರೆಯಲಾಗಿದೆ. ಶ್ರವಣ ದೋಷ ಇರುವವರಿಗೆ
₹ 500 ಕೋಟಿ ವೆಚ್ಚದಲ್ಲಿ ಕಾಕ್ಲಿಯರ್‌ ಇಂಪ್ಲಾಂಟ್‌ ಅಳವಡಿಸಲಾಗುತ್ತಿದೆ’ ಎಂದರು.

‘ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 243 ‘ನಮ್ಮ ಕ್ಲಿನಿಕ್‌’ಗಳು ಕಾರ್ಯಾರಂಭ ಮಾಡಲಿದ್ದು, ಸದ್ಯ 108 ಕ್ಲಿನಿಕ್‌ಗಳು ಉದ್ಘಾಟನೆಯಾಗಿದೆ. ಇನ್ನು ಎರಡು ವಾರಗಳಲ್ಲಿ ಬಾಕಿವುಳಿದ ‘ನಮ್ಮ ಕ್ಲಿನಿಕ್‌’ಗಳಿಗೆ ಚಾಲನೆ ನೀಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ತಿಳಿಸಿದರು.

‘ಈ ಹಿಂದೆ ನಗರ ಪ್ರದೇಶದ 50 ಸಾವಿರದಿಂದ 60 ಸಾವಿರ ಜನರಿಗೆ ಒಂದು ಚಿಕಿತ್ಸಾ ಕೇಂದ್ರವಿತ್ತು. ನಾವು 15 ಸಾವಿರದಿಂದ 20 ಸಾವಿರ ಜನಸಂಖ್ಯೆಗೆ ಒಂದು ‘ನಮ್ಮ ಕ್ಲಿನಿಕ್‌’ ಆರಂಭಿಸುತ್ತಿದ್ದೇವೆ. ಕೆಲವೇ ದಿನಗಳಲ್ಲಿ ಮಹಿಳೆಯರಿಗಾಗಿ ‘ಆಯುಷ್ಮತಿ ಕ್ಲಿನಿಕ್‌’ ಕೂಡ ಕಾರ್ಯಾರಂಭ ಆಗಲಿದೆ’ ಎಂದರು.

ಅಬಕಾರಿ ಸಚಿವ ಕೆ. ಗೋಪಾಲಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.