ಹೆಸರಘಟ್ಟ: ಪುಷ್ಪ ಕೃಷಿ ಕ್ಷೇತ್ರದಲ್ಲಿ ಹೊಸ ತಳಿಗಳು ಹಾಗೂ ಹೊಸ ಕೃಷಿ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವಂತೆ ಆಂಧ್ರಪ್ರದೇಶದ ಡಾ.ವೈಎಸ್ಆರ್ ತೋಟಗಾರಿಕಾ ವಿಶ್ವವಿದ್ಯಾಲಯದ ಕುಲಪತಿ ಟಿ. ಜಾನಕಿರಾಮ್ ವಿಜ್ಞಾನಿಗಳಿಗೆ ಸಲಹೆ ನೀಡಿದರು.
ಇಲ್ಲಿನ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯಲ್ಲಿ(ಐಐಎಚ್ಆರ್) ಮಂಗಳವಾರದಿಂದ ಆರಂಭವಾದ ’ಭಾರತದಲ್ಲಿ ಪುಷ್ಪ ಕೃಷಿಯಲ್ಲಿನ ಇತ್ತೀಚೆಗಿನ ಒಲವು ಮತ್ತು ಭವಿಷ್ಯದ ನಿರೀಕ್ಷೆಗಳು’ ಕುರಿತ ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
’ಜೈವಿಕ ತಂತ್ರಜ್ಞಾನಗಳ ಮೂಲಕ ಹೊಸ ತಳಿಗಳನ್ನು ಅಭಿವೃದ್ಧಿಪಡಿಸಬಹುದು. ಕೃತಿಕ ಬುದ್ದಿಮತ್ತೆ(ಎಐ), ಸೆನ್ಸರ್ಗಳನ್ನು ಬಳಸಿಕೊಂಡು ನಿಖರ ಕೃಷಿ ಪದ್ಧತಿ ಮೂಲಕ ಪುಷ್ಪಕೃಷಿ ಕೈಗೊಳ್ಳಲು ಅವಕಾಶವಿದೆ. ಡ್ರೋಣ್ ತಂತ್ರಜ್ಞಾನವೂ ಪುಷ್ಪಕೃಷಿಗೆ ನೆರವಾಗುತ್ತದೆ’ ಎಂದರು.
ರಾಜ್ಯ ತೋಟಗಾರಿಕೆ ಇಲಾಖೆ ನಿರ್ದೇಶಕ ಡಿ.ಎಸ್.ರಮೇಶ್, ’ಜಾಗತಿಕ ಮಟ್ಟದಲ್ಲಿ ಬಳಕೆಯಾಗುವಂತಹ ಹೂವಿನ ತಳಿ ಹಾಗೂ ಕೃಷಿ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವಂತೆ ವಿಜ್ಞಾನಿಗಳಿಗೆ ತಿಳಿಸಿದರು. ’ರೈತರು ತಮ್ಮ ಜಮೀನಿನಲ್ಲಿ ಯಾವುದೇ ಹೊಸ ಬೆಳೆಗಳನ್ನು ಬೆಳೆಯುವ ಮೊದಲು, ತಜ್ಞರು, ವಿಜ್ಞಾನಿಗಳು, ಮಾರುಕಟ್ಟೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ನಂತರ ಮುಂದುವರಿಯಿರಿ’ ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಪುಷ್ಪ ಕೃಷಿಯಲ್ಲಿ ಸಾಧನೆ ಮಾಡಿದ ನಾಲ್ವರು ರೈತರನ್ನು ಸನ್ಮಾನಿಸಲಾಯಿತು. ಮೂರು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ‘ಅರ್ಕ ಕೀರ್ತನ’ ಹೆಸರಿನ ಸುಗಂಧರಾಜ ತಳಿಯನ್ನು ಬೆಳೆಯಲು ರೈತೋದ್ಯಮಿಯೊಬ್ಬರಿಗೆ ಪರವಾನಗಿ ನೀಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.