ADVERTISEMENT

ಹೊಸ ವರ್ಷ 2026: ಪೊಲೀಸ್ ಸರ್ಪಗಾವಲಿನಲ್ಲಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 20:35 IST
Last Updated 31 ಡಿಸೆಂಬರ್ 2025, 20:35 IST
<div class="paragraphs"><p>ಬ್ರಿಗೇಡ್‌ ರಸ್ತೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಪೊಲೀಸ್‌ ಸರ್ಪಗಾವಲಿನ ನಡುವೆ ಸಾಗಿದ ಜನರು ಪ್ರಜಾವಾಣಿ ಚಿತ್ರ/ ರಂಜು ಪಿ.</p></div>

ಬ್ರಿಗೇಡ್‌ ರಸ್ತೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಪೊಲೀಸ್‌ ಸರ್ಪಗಾವಲಿನ ನಡುವೆ ಸಾಗಿದ ಜನರು ಪ್ರಜಾವಾಣಿ ಚಿತ್ರ/ ರಂಜು ಪಿ.

   

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಳೆದ ಜೂನ್‌ ತಿಂಗಳಲ್ಲಿ ಸಂಭವಿಸಿದ್ದ ಕಾಲ್ತುಳಿತದ ನಂತರ ಎಚ್ಚೆತ್ತಿರುವ ಗೃಹ ಇಲಾಖೆ ಅಧಿಕಾರಿಗಳು, ಹೊಸ ವರ್ಷಾಚರಣೆಯ ಬಂದೋಬಸ್ತ್‌ಗೆ ನಗರದಲ್ಲಿ ಪೊಲೀಸ್ ಸರ್ಪಗಾವಲನ್ನೇ ಹಾಕಿದ್ದರು.

ಮಹಾತ್ಮ ಗಾಂಧಿ ರಸ್ತೆ, ಚರ್ಚ್‌ ಸ್ಟ್ರೀಟ್, ಬ್ರಿಗೇಡ್‌ ರಸ್ತೆ, ಕೋರಮಂಗಲ, ಒಪೆರಾ ಜಂಕ್ಷನ್‌, ರೆಸ್ಟ್‌ಹೌಸ್ ರಸ್ತೆ, ಸೇಂಟ್‌ ಮಾರ್ಕ್‌ ರಸ್ತೆ, ರಿಚ್ಮಂಡ್‌ ರಸ್ತೆ, ರೆಸಿಡೆನ್ಸಿ ರಸ್ತೆಯಲ್ಲಿ ಬುಧವಾರ ರಾತ್ರಿ ಹೆಜ್ಜೆ ಹೆಜ್ಜೆಗೂ ಪೊಲೀಸರು ಕಂಡುಬಂದರು

ADVERTISEMENT

ರಾತ್ರಿ 9 ಗಂಟೆವರೆಗೂ ಈ ರಸ್ತೆಗಳಲ್ಲಿ ಹೆಚ್ಚಿನ ಜನರು ಕಂಡುಬರಲಿಲ್ಲ. ರಾತ್ರಿ 10 ಗಂಟೆಯ ಸುಮಾರಿಗೆ ದೊಡ್ಡ ಸಂಖ್ಯೆಯಲ್ಲಿ ಯುವ ಸಮೂಹ ಸಂಭ್ರಮಾಚರಣೆ ನಡೆಯುವ ಸ್ಥಳದಲ್ಲಿ ಜಮಾವಣೆಗೊಂಡಿತ್ತು. ಚರ್ಚ್‌ ಸ್ಟ್ರೀಟ್‌ನಲ್ಲಿ (ಮೆಟ್ರೊ ಪ್ರವೇಶ ದ್ವಾರ) ಬ್ಯಾರಿಕೇಡ್ ಹಾಕಿ ಸರದಿಯಲ್ಲಿ ಜನರು ಸಂಚರಿಸುವಂತೆ ಮಾಡಲಾಗಿತ್ತು. ಒಂದುಬದಿಯ ಪಬ್‌ಗಳಿಗೆ ತೆರಳುವುದಕ್ಕೆ ಅವಕಾಶ ಇರಲಿಲ್ಲ. ಈ ಬಾರಿ ಪೀಪಿ ಬಳಕೆಯನ್ನು ನಿಷೇಧಿಸಲಾಗಿತ್ತು.

ಮಹಾತ್ಮ ಗಾಂಧಿ ರಸ್ತೆ, ಚರ್ಚ್‌ ರಸ್ತೆ ಹಾಗೂ ಬ್ರಿಗೇಡ್ ರಸ್ತೆಯಲ್ಲಿ ಬಂದೋಬಸ್ತ್‌ಗೆ ಮೂರು ಸಾವಿರಕ್ಕೂ ಹೆಚ್ಚಿನ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಅಲ್ಲಲ್ಲಿ ಹೆಚ್ಚುವರಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು. 60ಕ್ಕೂ ಹೆಚ್ಚು ಮಹಿಳಾ ಸಹಾಯ ಕೇಂದ್ರ ಸ್ಥಾಪಿಸಲಾಗಿತ್ತು. ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಕೋರಮಂಗಲದಲ್ಲಿ ಯುವಕ ಯುವತಿಯರ ಸಂಭ್ರಮ  ಪ್ರಜಾವಾಣಿ ಚಿತ್ರ/ ವಿ.ಪುಷ್ಕರ್‌ 

ಸಿವಿಲ್‌ ಪೊಲೀಸ್‌, ಸಶಸ್ತ್ರಮೀಸಲು ಪಡೆ, ಕೆಎಸ್‌ಆರ್‌ಪಿ, ಕ್ಷಿಪ್ರ ಕಾರ್ಯ ಪಡೆ, ಗೃಹ ರಕ್ಷಕ ದಳದ ಸಿಬ್ಬಂದಿ ಹಾಗೂ ನಾಗರಿಕ ಪೊಲೀಸ್‌ರನ್ನೂ ಭದ್ರತೆಗೆ ನಿಯೋಜನೆ ಮಾಡಲಾಗಿತ್ತು.

ಎಂ.ಜಿ. ರಸ್ತೆಯ ಅನಿಲ್ ಕುಂಬ್ಳೆ ವೃತ್ತದಿಂದ ಟ್ರಿನಿಟಿ ವೃತ್ತದವರೆಗೆ, ಬ್ರಿಗೇಡ್ ರಸ್ತೆಯಲ್ಲಿ ಕಾವೇರಿ ಎಂಪೋರಿಯಂ ಜಂಕ್ಷನ್‌ನಿಂದ ಅಪೇರಾ ಜಂಕ್ಷನ್‌ವರೆಗೆ, ಚರ್ಚ್ ಸ್ಟ್ರೀಟ್​​ನ ಬ್ರಿಗೇಡ್ ರಸ್ತೆ ಜಂಕ್ಷನ್​ನಿಂದ ಮ್ಯೂಸಿಯಂ ರಸ್ತೆ ಜಂಕ್ಷನ್‌ವರೆಗೆ, ರೆಸಿಡೆನ್ಸಿ ರಸ್ತೆಯ ಆಶೀರ್ವಾದಂ ಜಂಕ್ಷನ್‌ನಿಂದ ಮೆಯೊ ಹಾಲ್ ಜಂಕ್ಷನ್‌ವರೆಗೆ ವಾಹನ ಸಂಚಾರ ನಿಷೇಧಿಸಲಾಗಿತ್ತು. ನಡೆದು ಸಾಗುವವರಿಗೆ ಮಾತ್ರವೇ ಅವಕಾಶ ಕಲ್ಪಿಸಲಾಗಿತ್ತು. ತಡರಾತ್ರಿ 12.30ರ ಬಳಿಕ ಈ ರಸ್ತೆಗಳಲ್ಲಿ ಬ್ಯಾರಿಕೇಡ್ ತೆರವು ಮಾಡಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು.

ಕೋರಮಂಗಲದ ವೈ.ಡಿ.ಮಠ ರಸ್ತೆಯ ಸುಖಸಾಗರ ಜಂಕ್ಷನ್‌ನಿಂದ ಮೈಕ್ರೋಲ್ಯಾಂಡ್‌ ಜಂಕ್ಷನ್‌, ವೈ.ಡಿ.ಮಠ ರಸ್ತೆಗೆ ಸಂಪರ್ಕ ಕಲ್ಪಿಸುವ ಅಡ್ಡರಸ್ತೆಗಳಾದ ಜೆ.ಎನ್.ಸಿ ರಸ್ತೆ, 4ನೇ ಬಿ ಕ್ರಾಸ್‌ರಸ್ತೆ, ಟಾನಿಕ್ ಹಿಂಭಾಗದ ರಸ್ತೆ, 17ನೇ ಎಚ್ ಮುಖ್ಯರಸ್ತೆಗಳಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿತ್ತು.

ಮದ್ಯಸೇವಿಸಿ ಯುವಕರು ದುರ್ವತನೆ ತೋರುತ್ತಾರೆ ಎನ್ನುವ ಕಾರಣಕ್ಕೆ ನಗರದ ಹಲವು ಮೇಲ್ಸೇತುವೆಗಳಲ್ಲಿ (ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಮೇಲ್ಸೇತುವೆ ಹೊರತುಪಡಿಸಿ) ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ವಾಹನ ಸವಾರರು ಪರ್ಯಾಯ ಮಾರ್ಗ ಬಳಸಿ ತೆರಳಿದರು.

ನಗರ ಪೊಲೀಸ್ ಕಮಿಷನರ್ ಸೀಮಾಂತ್‌ಕುಮಾರ್ ಸಿಂಗ್ ಅವರು ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಸ್ಥಳದಲ್ಲಿ ಅಗ್ನಿಶಾಮಕ ದಳದ ವಾಹನಗಳನ್ನು ನಿಯೋಜನೆ ಮಾಡಲಾಗಿತ್ತು.

ಕೋರಮಂಗಲದಲ್ಲಿ ಯುವಕ/ಯುವತಿಯರ ಸಂಭ್ರಮ  ಪ್ರಜಾವಾಣಿ ಚಿತ್ರ/ ವಿ.ಪುಷ್ಕರ್‌ 

ಭದ್ರತೆಗೆ 20 ಸಾವಿರ ಪೊಲೀಸ್ ಸಿಬ್ಬಂದಿ

ನಗರದಾದ್ಯಂತ ಹೊಸ ವರ್ಷಾಚರಣೆಯ ಬಂದೋಬಸ್ತ್‌ ಕರ್ತವ್ಯಕ್ಕೆ ಒಟ್ಟು 20 ಸಾವಿರ ಪೊಲೀಸರನ್ನು ನಿಯೋಜಿಸಲಾಗಿತ್ತು. ಕಾನೂನು ಸುವ್ಯವಸ್ಥೆ ವಿಭಾಗದ 14 ಸಾವಿರ 2500 ಸಂಚಾರ ಪೊಲೀಸರು 88 ಕೆಎಸ್ಆರ್‌ಪಿ ತುಕಡಿಗಳು 266 ಹೊಯ್ಸಳ ವಾಹನ 250 ಕೋಬ್ರಾ ವಾಹನಗಳು ಹಾಗೂ 400 ಟ್ರಾಫಿಕ್ ವಾರ್ಡನ್‌ಗಳನ್ನು ನಿಯೋಜನೆ ಮಾಡಲಾಗಿತ್ತು.

ಸಂಭ್ರಮಾಚರಣೆ ನಡುವೆ ಎಲ್ಲೆಲ್ಲಿ ಏನಾಯಿತು?

l ರಾತ್ರಿ 10 ಗಂಟೆಯ ಬಳಿಕ ಸಂಭ್ರಮಾಚರಣೆ ಸ್ಥಳಕ್ಕೆ ಬಂದ ಜನರು

l ಹೊಸ ವರ್ಷದ ಸಂಭ್ರಮದ ನಡುವೆ ಯಲಹಂಕ ಭಾಗದಲ್ಲಿ ಮಳೆಯ ಸಿಂಚನ

l ಬ್ರಿಗೇಡ್‌ ರಸ್ತೆ ಪ್ರವೇಶಿಸಲು ಸ್ಕ್ಯಾನರ್‌ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ಕಡಿಮೆ ಸಂಖ್ಯೆಯ ಸ್ಕ್ಯಾನರ್ ಅಳವಡಿಸಿದ್ದರಿಂದ ನೂಕುನುಗ್ಗಲು ಉಂಟಾಗಿತ್ತು

l ಬಂದೋಬಸ್ತ್‌ಗೆ ಹೊರ ಜಿಲ್ಲೆಯ ಪೊಲೀಸರ ಬಳಕೆ

l 160 ಸ್ಥಳಗಳಲ್ಲಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದವರ ತಪಾಸಣೆ, ಪ್ರಕರಣ ದಾಖಲು

l ರಾತ್ರಿ 12 ಕಳೆಯುತ್ತಿದ್ದಂತೆಯೇ ಹೊಸ ವರ್ಷದ ಶುಭಾಶಯ ವಿನಿಯಮ ಮಾಡಿಕೊಂಡ ಜನರು

l ಚರ್ಚ್‌ ಸ್ಟ್ರೀಟ್‌ನಲ್ಲಿ ಕರ್ತವ್ಯನಿರತ ಮಹಿಳಾ ಸಿಬ್ಬಂದಿಯೊಂದಿಗೆ ದುರ್ವತನೆ
ತೋರಿದ ಯುವಕರನ್ನು ವಶಕ್ಕೆ ಪಡೆದ ಸಿಸಿಬಿ ಪೊಲೀಸರು 

l ವಾಹನ ತಪಾಸಣೆ ವೇಳೆ ಪೊಲೀಸರಿಗೆ ನಿಂದನೆ: ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ನಗರದಲ್ಲಿ ಘಟನೆ

l ಮದ್ಯದ ನಶೆಯಲ್ಲಿ ಅಲ್ಲಲ್ಲಿ ಯುವಕರ ಪುಂಡಾಟ, ತಿಳಿವಳಿಕೆ ಹೇಳಿ ಮನೆಗೆ ಕಳುಹಿಸಿದ ಪೊಲೀಸರು 

l ಮದ್ಯದ ಅಮಲಿನಲ್ಲಿ ನಡೆದು ತೆರಳಲು
ಸಾಧ್ಯವಾಗದವರನ್ನು ಪೊಲೀಸ್‌ ವಾಹನದಲ್ಲಿ ಮನೆಗೆ ಕಳುಹಿಸಿದ ಸಿಬ್ಬಂದಿ

l ಮಹಾತ್ಮ ಗಾಂಧಿ ರಸ್ತೆಯಲ್ಲಿ ನೂಕುನುಗ್ಗಲಿನಿಂದಾಗಿ
ಕುಸಿದ ವ್ಯಕ್ತಿ ಮತ್ತು ಬಿದ್ದ ವ್ಯಕ್ತಿಯನ್ನು
ಆಂಬುಲೆನ್ಸ್‌ನಲ್ಲಿ ಶಿವಾಜಿನಗರದ ಬೌರಿಂಗ್ ಆಸ್ಪತ್ರೆಗೆ ಕಳುಹಿಸಿದ ಪೊಲೀಸರು

l ಎಂ.ಜಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು

- ಸ್ಥಳದಲ್ಲೇ ದಂಡ

ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದವರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡು ದಂಡ ವಿಧಿಸಲಾಗುವುದು ಎಂದು ಸಂಚಾರ ಪೊಲೀಸರು ಎಚ್ಚರಿಕೆ ನೀಡಿದ್ದರು. ಕೆಲವರು ಹೊಸ ವರ್ಷದ ಪಾರ್ಟಿಯಲ್ಲಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿಕೊಂಡು ಮನೆಯತ್ತ ತೆರಳುತ್ತಿದ್ದರು. ಅಂತಹವರನ್ನು ಜಂಕ್ಷನ್‌ಗಳಲ್ಲಿ ತಡೆದ ಪೊಲೀಸರು ಸ್ಥಳದಲ್ಲೇ ದಂಡ ಹಾಕಿದರು. ಅಲ್ಲದೇ ಪ್ರಕರಣ ದಾಖಲಿಸಿಕೊಂಡು ಕಳುಹಿಸಿದರು.

ಟೋಯಿಂಗ್‌ ಬಿಸಿ

ಕೆಲವು ರಸ್ತೆಗಳಲ್ಲಿ ವಾಹನಗಳ ನಿಲುಗಡೆ ನಿರ್ಬಂಧಿಸಿ ಸಂಚಾರ ಪೊಲೀಸರು ಆದೇಶಿಸಿದ್ದರು. ಆದರೂ ರಸ್ತೆಯ ಬದಿಯಲ್ಲಿ ದ್ವಿಚಕ್ರ ವಾಹನಗಳನ್ನು ನಿಲುಗಡೆ ಮಾಡಿ ಸವಾರರು ತೆರಳಿದ್ದರು. ಅಂತಹ ವಾಹನಗಳನ್ನು ಟೋಯಿಂಗ್‌ ಮಾಡಲಾಯಿತು. ಹೊಸ ವರ್ಷಾಚರಣೆಗೆ ಸ್ವಂತ ವಾಹನದಲ್ಲಿ ಬಂದವರಿಗೆ ದಂಡದ ಬಿಸಿ ತಟ್ಟಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.