ADVERTISEMENT

ಕೇಂದ್ರ ಕಾರಾಗೃಹ: ಉಗ್ರರಿಗೆ ನೆರವು ನೀಡಿದ ಆರೋಪ; ಹಣದ ಮೂಲ ಪತ್ತೆಗೆ ತನಿಖೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 22:30 IST
Last Updated 12 ಜುಲೈ 2025, 22:30 IST
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ 
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ    

ಬೆಂಗಳೂರು: ಕೇಂದ್ರ ಕಾರಾಗೃಹದಲ್ಲಿ ಉಗ್ರರಿಗೆ ನೆರವು ನೀಡಿದ ಆರೋಪದಡಿ ಬಂಧಿಸಲಾಗಿರುವ ಮೂವರು ಆರೋಪಿಗಳ ವಿಚಾರಣೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ತೀವ್ರಗೊಳಿಸಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನ ಮನೋವೈದ್ಯ ನಾಗರಾಜ್, ಸಶಸ್ತ್ರ ಮೀಸಲು ಪಡೆಯ ಎಎಸ್ಐ ಚಾಂದ್ ಪಾಷಾ ಹಾಗೂ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಜುನೈದ್ ಅಹಮದ್‌ನ ತಾಯಿ ಅನೀಸ್ ಫಾತೀಮಾ ಅವರ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿರುವ ಎನ್‌ಐಎ, ಲಕ್ಷಾಂತರ ರೂಪಾಯಿ ವಹಿವಾಟು ನಡೆಸಿರುವುದನ್ನು ಪತ್ತೆ ಹಚ್ಚಿದೆ.

ಮೂವರು ಆನ್‌ಲೈನ್‌, ನಗದು ಹಾಗೂ ಕೊಡುಗೆ ರೂಪದಲ್ಲಿ ಸ್ವೀಕರಿಸಿದ್ದಾರೆ. ಉಗ್ರ ಟಿ.ನಾಸೀರ್ ಸೂಚನೆ ಮೇರೆಗೆ ಹಣ ಪಡೆದಿರುವುದು ಗೊತ್ತಾಗಿದೆ. ಚಾಂದ್ ಪಾಷಾ ಅವರು ತನ್ನ ಖಾತೆ ಮಾತ್ರವಲ್ಲದೇ ಪುತ್ರನ ಖಾತೆಗೂ ಹಣ ಹಾಕಿಸಿಕೊಂಡಿದ್ದಾರೆ.

ADVERTISEMENT

ನಾಗರಾಜು ಸಹಾಯಕಿ ಪವಿತ್ರಾ ಅವರ ಖಾತೆಯಲ್ಲಿ ಸುಮಾರು ₹70 ಲಕ್ಷ ವಹಿವಾಟು ನಡೆದಿರುವುದು ಪತ್ತೆಯಾಗಿದೆ. ದೇಶ, ವಿದೇಶಗಳಿಂದ ಆರೋಪಿಗಳಿಗೆ ಹಣ ಸಂದಾಯವಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ‌ಹಾಗಾಗಿ ಎನ್‌ಐಎ ಅಧಿಕಾರಿಗಳು ಈ ಹಣದ ಮೂಲ ಪತ್ತೆ ಮಾಡುವ ನಿಟ್ಟಿನಲ್ಲಿ ತನಿಖೆ ಆರಂಭಿಸಿದ್ದಾರೆ.

ಚಾಂದ್ ಪಾಷಾ ಮನೆಯಲ್ಲಿ ಎನ್ಐಎ ಶೋಧ ನಡೆಸಿದ ವೇಳೆ ಪತ್ತೆಯಾದ ಹಾರ್ಡ್‌ಡಿಸ್ಕ್, ಪೆನ್‌ಡ್ರೈವ್ ಹಾಗೂ ಡೈರಿಯಲ್ಲಿ ಮಹತ್ವದ ಮಾಹಿತಿ ಲಭ್ಯವಾಗಿದೆ.  

ಜೈಲಿಗೆ ಬರುವ ಶಂಕಿತ ಉಗ್ರರು, ಕೈದಿಗಳು ಹಾಗೂ ಪ್ರಭಾವಿಗಳಿಗೆ 2012ರಿಂದ ಮೊಬೈಲ್ ಸೇರಿ ಇತರೆ ವಸ್ತುಗಳನ್ನು ಪೂರೈಸಿ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡಿರುವುದು ಎನ್‌ಐಎ ವಿಚಾರಣೆ ಗೊತ್ತಾಗಿದೆ. ಅಕ್ರಮ ಸಂಪಾದನೆಯಿಂದ ಬೇರೆ ಕಡೆ ಆಸ್ತಿ, ನಿವೇಶನ ಹೊಂದಿರುವ ಬಗ್ಗೆ ಎನ್‌ಐಎ ಪರಿಶೀಲನೆ ನಡೆಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.