ADVERTISEMENT

ಲೋಕಸಭಾ ಚುನಾವಣೆಗೆ ನನ್ನ ಕುಟುಂಬದಿಂದ ಯಾರೂ ಸ್ಪರ್ಧಿಸುವುದಿಲ್ಲ: ಸತೀಶ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 4 ಜನವರಿ 2024, 8:02 IST
Last Updated 4 ಜನವರಿ 2024, 8:02 IST
ಸತೀಶ ಜಾರಕಿಹೊಳಿ
ಸತೀಶ ಜಾರಕಿಹೊಳಿ   

ಬೆಂಗಳೂರು: ‘ನನಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಆಸಕ್ತಿ ಇಲ್ಲ. ನಾನು ಅಥವಾ ನಮ್ಮ ಕುಟುಂಬದ ಯಾರೂ ಸ್ಪರ್ಧಿಸುವುದಿಲ್ಲ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ಬೆಳಗಾವಿ ಅಥವಾ ಚಿಕ್ಕೋಡಿ ಈ ಎರಡೂ ಕ್ಷೇತ್ರಗಳಲ್ಲಿ ಕುಟುಂಬದ ಯಾವ ಸದಸ್ಯರು ಸ್ಪರ್ಧಿಸುವುದಿಲ್ಲ. ಪಕ್ಷ ಕಾರ್ಯಕರ್ತರಿಗೆ ಈ ಭಾರಿ ಅವಕಾಶ ಸಿಗಲಿದೆ. ಹೈಕಮಾಂಡ್ ಏನು ಹೇಳುತ್ತದೊ ನೋಡೋಣ’ ಎಂದರು.

ಶ್ರೀಕಾಂತ್ ಪೂಜಾರಿ ಬಂಧನ ಖಂಡಿಸಿ ಬಿಜೆಪಿ ಪ್ರತಿಭಟನೆ ನಡೆಸುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ‘ಹಳೇ ಕೇಸ್‌ಗಳಿವೆ ಎಂದು ಶ್ರೀಕಾಂತ್ ಪೂಜಾರಿಯನ್ನು ಪೋಲಿಸರು ಬಂಧಿಸಿದ್ದಾರೆ. ಇದರಲ್ಲಿ ಗೊಂದಲ ಮಾಡುವ ಅವಶ್ಯಕತೆ ಇಲ್ಲ’ ಎಂದರು. 

ADVERTISEMENT

‘ಜನರ ಸಮಸ್ಯೆಗಳ ಸಂಬಂಧ ಬಿಜೆಪಿಯವರು ಪ್ರತಿಭಟನೆ ನಡೆಸಲಿ. ಅದು ಬಿಟ್ಟು ಪ್ರಕರಣಗಳಿರುವ ವ್ಯಕ್ತಿಯ ಪರವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಬೆಳಕು ಚೆಲ್ಲಲು ಕರ್ನಾಟಕದಲ್ಲಿ ಸಾಕಷ್ಟು ವಿಷಯಗಳಿವೆ’ ಎಂದರು. 

‘ರಾಮಮಂದಿರ ಉದ್ಘಾಟನೆ ಏಕ ವ್ಯಕ್ತಿಯ ಪ್ರದರ್ಶನ ಆಗುತ್ತಿದೆ. ಲೋಕಸಭಾ ಚುನಾವಣೆ ಬೇರೆ ಬರುತ್ತಿದೆ. ಎಲ್ಲ ರಾಜಕೀಯ ಪಕ್ಷಗಳಿಗೆ ಆಹ್ವಾನ ಕೊಡಬೇಕು. ಉತ್ತರಪ್ರದೇಶದ  ಮುಖ್ಯಮಂತ್ರಿಯನ್ನು ಹೊರತುಪಡಿಸಿದರೆ ಬೇರೆ ಯಾವ ಮುಖ್ಯಮಂತ್ರಿಗೂ ಆಹ್ವಾನ ಕೊಟ್ಟಿಲ್ಲ’ ಎಂದರು. 

‘ನನಗೆ ಆಹ್ವಾನ ಬಂದರೆ ನಾನು ಹೋಗುವುದಿಲ್ಲ. ನಮ್ಮ ಊರಿನಲ್ಲಿ ರಾಮಮಂದಿರ ಇದೆ. ಅಲ್ಲೆ ಪೂಜೆ ಮಾಡುತ್ತೇನೆ’ ಎಂದರು.

ಬಿ.ಕೆ. ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಮುನ್ನೆಚ್ಚರಿಕೆ ಕ್ರಮವಾಗಿ ಹರಿಪ್ರಸಾದ್ ಹೇಳಿದ್ದಾರೆ. ಕೋಮುಗಲಭೆ ಆಗಬಾರದು ಎಂದು ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಆಯಾ ರಾಜ್ಯಗಳು ನಿಗಾ ವಹಿಸಬೇಕು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.