ADVERTISEMENT

ಎಂ.ಜಿ.ರಸ್ತೆಯ ‘ಒನ್‌ 8 ಕಮ್ಯೂನ್‌’ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗೆ ನೋಟಿಸ್

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2024, 15:23 IST
Last Updated 21 ಡಿಸೆಂಬರ್ 2024, 15:23 IST
ಬಿಯರ್
ಬಿಯರ್   

ಬೆಂಗಳೂರು: ಎಂ.ಜಿ.ರಸ್ತೆಯ ರತ್ನಂ ಕಾಂಪ್ಲೆಕ್ಸ್‌ನಲ್ಲಿರುವ ‘ಒನ್‌ 8 ಕಮ್ಯೂನ್‌’ ಬಾರ್‌ ಆ್ಯಂಡ್‌ ರೆಸ್ಟೋರೆಂಟ್, ‘ಅಗ್ನಿಶಾಮಕದಳದ ಅನುಮತಿ ಪಡೆದಿಲ್ಲ’ ಎಂದು ಬಿಬಿಎಂಪಿ ನೋಟಿಸ್‌ ಜಾರಿ ಮಾಡಿದೆ.

‘ಅಗ್ನಿಶಾಮಕ ದಳದಿಂದ ನಕ್ಷೆ, ಪ್ರಮಾಣ ಪತ್ರ, ಎನ್‌ಒಸಿ, ಅನುಮತಿ ಪರವಾನಗಿ ಪಡೆಯದೆ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ನಡೆಸಲಾಗುತ್ತಿದೆ. ಅಗ್ನಿ ಅವಘಡ ಸಂಭವಿಸಿದಲ್ಲಿ  ಪ್ರಾಣಹಾನಿ ಆಗುವ ಸಂಭವವಿರುತ್ತದೆ ಎಂದು ಸಾಮಾಜಿಕ ಹೋರಾಟಗಾರ ಎಚ್‌.ಎಂ. ವೆಂಕಟೇಶ್‌, ಕುಣಿಗಲ್‌ ನರಸಿಂಹಮೂರ್ತಿ ದೂರು ನೀಡಿದ್ದಾರೆ’ ಎಂದು ಪೂರ್ವವಲಯದ ಶಾಂತಿನಗರ ವಿಭಾಗದ ಆರೋಗ್ಯ ವೈದ್ಯಾಧಿಕಾರಿ ನೋಟಿಸ್‌ನಲ್ಲಿ ತಿಳಿಸಿದ್ದಾರೆ.

‘ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗೆ ಸಂಬಂಧಿಸಿ ಅಗ್ನಿಶಾಮಕ ದಳದಿಂದ ಪಡೆದ ಅನುಮತಿ ಪತ್ರವನ್ನು ಏಳು ದಿನದಲ್ಲಿ ಲಿಖಿತ ಸಮಜಾಯಿಷಿಯೊಂದಿಗೆ ನೀಡಬೇಕು. ಇಲ್ಲದಿದ್ದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ನ.29ರಂದು ನೀಡಿದ ನೋಟಿಸ್‌ನಲ್ಲಿ ಸೂಚಿಸಿಲಾಗಿದೆ.

ADVERTISEMENT

‘ಎರಡು ನೋಟಿಸ್‌ ನೀಡಿದ ಮೇಲೆ  ಬೀಗಮುದ್ರೆ ಹಾಕಬಹುದು. ಸೋಮವಾರ ಮತ್ತೆ ನೋಟಿಸ್‌ ಜಾರಿ ಮಾಡಿ, ನಂತರ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಆರೋಗ್ಯ ವೈದ್ಯಾಧಿಕಾರಿ ತಿಳಿಸಿದರು.

‘ಸುರಕ್ಷತೆಯ ಕ್ರಮಗಳ ಪರಿಶೀಲನೆ ನಡೆಸಿ, ತಪ್ಪಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ’ ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.