ಬೆಂಗಳೂರು: ಗುತ್ತಿಗೆ ಮುಂದುವರಿಸದ ಕಾರಣಕ್ಕೆ ಗ್ರಾಹಕರಿಗೆ ಟೆಲಿಕಾಂ ಸೇವೆ ಒದಗಿಸುವ ಒಎಫ್ಸಿ ಕೇಬಲ್ಗಳನ್ನು ಕತ್ತರಿಸಿ, ಸೇವೆಯಲ್ಲಿ ವ್ಯತ್ಯಯ ಆಗುವಂತೆ ಮಾಡಿದ್ದಾರೆ ಎಂದು ಆರೋಪಿಸಿ ಇಬ್ಬರು ಗುತ್ತಿಗೆದಾರರ ವಿರುದ್ಧವೊಡಾಫೋನ್ ಇಂಡಿಯಾ ಲಿಮಿಟೆಡ್ (ವಿಐಎಲ್) ಪೊಲೀಸರಿಗೆ ದೂರು ನೀಡಿದೆ.
ಈ ಸಂಬಂಧ ಬಾಲಕೃಷ್ಣ ಹಾಗೂ ಮನು ಎಂಬುವರ ವಿರುದ್ಧ ಸಂಪಿಗೆಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಕೇಬಲ್ ನಿರ್ವಹಣೆಯ ಗುತ್ತಿಗೆ ಮುಂದುವರಿಸದ ಕಾರಣ, ನಾಗವಾರ, ಥಣಿಸಂದ್ರ, ಟೆಲಿಕಾಂ ಬಡಾವಣೆಗಳಲ್ಲಿ ಉದ್ದೇಶಪೂರ್ವಕವಾಗಿ ಕೇಬಲ್ಗಳನ್ನು ಕಡಿತಗೊಳಿಸಿ, ಗ್ರಾಹಕರ ಸೇವೆಗೆ ತೊಂದರೆ ಮಾಡಿದ್ದಾರೆ. ಗ್ರಾಹಕರಿಗೆ ಸಂಸ್ಥೆಯ ಮೇಲಿರುವ ವಿಶ್ವಾಸಕ್ಕೆ ಧಕ್ಕೆ ಉಂಟು ಮಾಡಿದ್ದಾರೆ. ಸಂಸ್ಥೆಗೂ ನಷ್ಟ ಆಗುವಂತೆ ಮಾಡಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದೆ.
‘ಸಂಸ್ಥೆಯ ತಾಂತ್ರಿಕ ಎಂಜಿನಿಯರ್ಗಳು ಕೇಬಲ್ ಸರಿಪಡಿಸುತ್ತಿದ್ದಾಗ ಸ್ಥಳಕ್ಕೆ ಬಂದು ನಾವೇ ಕೇಬಲ್ ಕಡಿತಗೊಳಿಸಿದ್ದು ಎಂದು ಹೇಳಿದ್ದಾರೆ. ಗ್ರಾಹಕರ ಸೇವೆಗೆ ವ್ಯತ್ಯಯ ಉಂಟು ಮಾಡಿದ ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದೆ.
‘ನಮ್ಮ ಗ್ರಾಹಕರಿಗೆ ಗರಿಷ್ಠ ವೇಗದ ಜಾಲದ ಮೂಲಕ ಅತ್ಯುತ್ತಮ ದರ್ಜೆಯ ಗೀಗಾನೆಟ್ ಸೇವೆ ಒದಗಿಸಲು ನಾವು ಬದ್ಧರಾಗಿದ್ದೇವೆ. ಕೆಲವರ ದುಷ್ಕೃತ್ಯಗಳಿಂದ ಗ್ರಾಹಕರಿಗೆ ಆಗುತ್ತಿರುವ ತೊಂದರೆಗೆ ನಾವು ವಿಷಾದಿಸುತ್ತೇವೆ’ ಎಂದುವೊಡಾಫೋನ್ ಇಂಡಿಯಾ ಲಿಮಿಟೆಡ್ (ವಿಐಎಲ್) ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.