ಬೆಂಗಳೂರು: ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ನೀಡಲಾಗುವುದು ಎಂಬುದಾಗಿ ಯುವತಿಗೆ ನಂಬಿಸಿ ₹2.49 ಲಕ್ಷ ವಂಚಿಸಲಾಗಿದೆ. ಈ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಲಸಂದ್ರದ ಜಾಹ್ನವಿ(25) ವಂಚನೆಗೊಳಗಾದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ಆ.8ರಂದು ಅಪರಿಚಿತ ದೂರವಾಣಿ ಸಂಖ್ಯೆಯಿಂದ ಜಾಹ್ನವಿ ಅವರ ವಾಟ್ಸ್ಆ್ಯಪ್ಗೆ ಸಂದೇಶವೊಂದು ಬಂದಿತ್ತು. ಸಂದೇಶ ಕಳುಹಿಸಿದ್ದ ವ್ಯಕ್ತಿ, ಕಾಲೇಜಿನ ಹಿರಿಯ ವಿದ್ಯಾರ್ಥಿಯೆಂದು ಪರಿಚಯಿಸಿಕೊಂಡಿದ್ದ. ‘ಅರೆಕಾಲಿಕ ಉದ್ಯೋಗವನ್ನು ಹುಡುಕುತ್ತಿದ್ದೀರಾ’ ಎಂದು ಕೇಳಿ ಜಾಹ್ನವಿ ಅವರೊಂದಿಗೆ ಸ್ನೇಹ ಸಂಪಾದಿಸಿದ್ದ. ಕೆಲವು ದಿನಗಳ ಬಳಿಕ, ಮತ್ತೊಂದು ಮೊಬೈಲ್ ಸಂಖ್ಯೆಯಿಂದ ಕರೆ ಮಾಡಿದ್ದ ಆರೋಪಿ, ‘ತಾನು ಯು.ಎಸ್ ಡಾಲರ್ ಅನ್ನು ಇಂಡಿಯಾ ರೂಪಾಯಿಗೆ ಬದಲಾಯಿಸುವ ಕೆಲಸ ಮಾಡುತ್ತಿದ್ದು, ನೀವೂ ಸಹ ಅದರಲ್ಲಿ ಹಣವನ್ನು ತೊಡಗಿಸಿದರೆ ಅದರಿಂದ ಬರುವ ಲಾಭವನ್ನು ನಿಮಗೆ ನೀಡುತ್ತೇನೆ ಎಂಬುದಾಗಿ ನಂಬಿಸಿದ್ದ’ ಎಂದು ಪೊಲೀಸರು ಹೇಳಿದರು.
‘ದೂರುದಾರರಿಂದ ಮೊದಲು ₹6 ಸಾವಿರ ಫೋನ್ ಪೇ ಮೂಲಕ ಪಡೆದುಕೊಂಡಿದ್ದ. ಇನ್ನೂ ಹೆಚ್ಚಿನ ಹಣವನ್ನು ಕಳುಹಿಸಿದರೆ ಹೆಚ್ಚಿನ ಹಣವನ್ನು ಲಾಭವಾಗಿ ಮರುಪಾವತಿಸುತ್ತೇನೆಂದು ಹೇಳಿದ್ದ. ಅಪರಿಚಿತ ವ್ಯಕ್ತಿಯ ಮಾತನ್ನು ನಂಬಿದ್ದ ದೂರುದಾರೆ, ಸೈಬರ್ ವಂಚಕ ನೀಡಿದ್ದ ಖಾತೆಗಳಿಗೆ ಹಂತಹಂತವಾಗಿ ₹2.49 ಲಕ್ಷ ವರ್ಗಾವಣೆ ಮಾಡಿದ್ದರು. ಲಾಭ ನೀಡದ ಕಾರಣ ವಂಚನೆಗೆ ಒಳಗಾಗಿರುವುದು ಗೊತ್ತಾಗಿ ದೂರು ನೀಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.