ಪ್ರಜಾವಾಣಿ ವಾರ್ತೆ
ಬೆಂಗಳೂರು: ‘ಕರ್ನಾಟಕ ಸಾಬೂನು ಮತ್ತು ಮಾರ್ಜಕ (ಕೆಎಸ್ಡಿಎಲ್) ಕಾರ್ಖಾನೆಯ ₹1,400 ಕೋಟಿ ಠೇವಣಿಯನ್ನು ನಷ್ಟದಲ್ಲಿರುವ ಸರ್ಕಾರಿ ಸಂಸ್ಥೆಗಳಿಗೆ ಸಾಲ ರೂಪದಲ್ಲಿ ನೀಡುವ ಸಚಿವ ಸಂಪುಟದ ತೀರ್ಮಾನ ಖಂಡನೀಯ’ ಎಂದು ಕೆಎಸ್ಡಿಎಲ್ ಎಂಪ್ಲಾಯೀಸ್ ಯೂನಿಯನ್ ತಿಳಿಸಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯೂನಿಯನ್ ಅಧ್ಯಕ್ಷ ಜಿ.ಆರ್. ಶಿವಶಂಕರ್, ‘ದೇಶದಲ್ಲಿ ಕೆಎಸ್ಡಿಎಲ್ ಕಾರ್ಖಾನೆಯ ಉತ್ಪನ್ನಗಳಿಗೆ ಭಾರಿ ಬೇಡಿಕೆ ಇದೆ. ಕಾರ್ಖಾನೆಯ ಠೇವಣಿ ರೂಪದಲ್ಲಿರುವ ಹಣವನ್ನು ಬಳಸಿ ಮೈಸೂರು, ಶಿವಮೊಗ್ಗ, ದಾಬಸ್ಪೇಟೆ ಹಾಗೂ ಬೆಂಗಳೂರಿನ ಯಶವಂತಪುರದಲ್ಲಿ ಕೆಎಸ್ಡಿಎಲ್ ಕಾರ್ಖಾನೆ ಜಮೀನಿನಲ್ಲಿ ಘಟಕಗಳನ್ನು ನಿರ್ಮಿಸಿ ಸಂಸ್ಥೆಯ ಉತ್ಪನ್ನಗಳನ್ನು ತಯಾರಿಸಬೇಕು’ ಎಂದು ಆಗ್ರಹಿಸಿದರು.
‘ಕೆಎಸ್ಡಿಎಲ್ ಕಾರ್ಖಾನೆಯಲ್ಲಿ 181 ಜನ ಕಾಯಂ ನೌಕರರಿದ್ದಾರೆ. 1,800ಕ್ಕೂ ಹೆಚ್ಚು ಜನ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ಕನಿಷ್ಠ ವೇತನ, ತುಟ್ಟಿಭತ್ಯೆ, ಹಕ್ಕಿನ ರಜೆಗಳು, ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ವೇತನ ಸೇರಿದಂತೆ ಯಾವುದೇ ರೀತಿಯ ಸೌಲಭ್ಯಗಳನ್ನು ನೀಡುತ್ತಿಲ್ಲ. ಎಂಟು ವರ್ಷಗಳಿಂದ ಬೋನಸ್ ನೀಡಿಲ್ಲ. ಠೇವಣಿ ಇಟ್ಟಿರುವ ಹಣದಿಂದ ಈ ನೌಕರರಿಗೆ ಅಗತ್ಯ ಸೌಲಭ್ಯ ಒದಗಿಸಬೇಕು. ಕಾರ್ಖಾನೆ ಹಣ ಇಲ್ಲಿನ ಅಭಿವೃದ್ಧಿಗೆ ಮಾತ್ರ ಬಳಕೆ ಆಗಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.