ಬೆಂಗಳೂರು: ಅರಮನೆ ಮೈದಾನದ ಗೇಟ್ ನಂಬರ್ 4 ಹಾಗೂ 5ರ ಸಮೀಪದ ಪಾರ್ಕಿಂಗ್ ಜಾಗದಲ್ಲಿ ಭಾನುವಾರ ಬೆಂಕಿ ಅವಘಡ ಸಂಭವಿಸಿದ್ದು, ಎರಡು ಕಾರುಗಳು ಸಂಪೂರ್ಣ ಸುಟ್ಟಿವೆ.
‘ಕಿಂಗ್ಸ್ ಕೋರ್ಟ್ ಗೇಟ್ ಬಳಿ ಕಾರುಗಳನ್ನು ನಿಲ್ಲಿಸಲಾಗಿತ್ತು. ಸಣ್ಣದಾಗಿ ಕಾಣಿಸಿಕೊಂಡ ಬೆಂಕಿಯ ಕೆನ್ನಾಲಿಗೆ ಕ್ರಮೇಣ ಹೆಚ್ಚಾಗಿತ್ತು. ಎರಡು ಕಾರುಗಳಿಗೆ ಬೆಂಕಿ ತಗುಲಿ ಉರಿಯಲಾರಂಭಿಸಿತ್ತು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.‘ಎರಡು ಕಾರುಗಳು ಸಂಪೂರ್ಣ ಸುಟ್ಟಿವೆ. ಇನ್ನೊಂದು ಕಾರು ಭಾಗಶಃ ಸುಟ್ಟಿದೆ. ಬೆಂಕಿ ಹೊತ್ತಿಕೊಳ್ಳಲು ಕಾರಣ ಗೊತ್ತಾಗಿಲ್ಲ’ ಎಂದರು. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ, ಎರಡು ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು.
ಅನಿಲ ಸೋರಿಕೆಯಿಂದ ಬೆಂಕಿ: ಚಾಮರಾಜಪೇಟೆ ಬಳಿಯ ವಿಠ್ಠಲ್ ನಗರದ ಹೂವಿನ ಅಲಂಕಾರ ಮಳಿಗೆಯೊಂದರಲ್ಲಿ ಅಡುಗೆ ಅನಿಲ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡಿದ್ದು, ಪೀಠೋಪಕರಣ ಹಾಗೂ ಅಲಂಕಾರಿಕ ವಸ್ತುಗಳು ಸುಟ್ಟಿವೆ.
‘ಮಳಿಗೆಯಲ್ಲಿದ್ದ ಅನಿಲ ಸೋರಿಕೆಯಿಂದ ಹೊತ್ತಿಕೊಂಡ ಬೆಂಕಿ, ಪಕ್ಕದ ಮನೆಗೂ ಕ್ರಮೇಣ ವ್ಯಾಪಿಸುತ್ತಿತ್ತು. ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಲಾಗಿದೆ’ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.