
ಬೆಂಗಳೂರು: ಕನ್ನಡದ ಆದಿಕವಿ ಪಂಪನ ಹೆಸರಿನಲ್ಲಿ ಪ್ರಾಧಿಕಾರ ಅಥವಾ ಪ್ರತಿಷ್ಠಾನ ಸ್ಥಾಪಿಸಿ, ಅಗತ್ಯ ಅನುದಾನ ನೀಡಬೇಕು ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಅವರಿಗೆ ಪತ್ರ ಬರೆದಿದ್ದಾರೆ. ಪಂಪನ ಹೆಸರಿನಲ್ಲಿ ಸಾಹಿತಿಗಳಿಗೆ ಒಂದು ಪ್ರಶಸ್ತಿ ನೀಡುವುದು ಹೊರತುಪಡಿಸಿ ಬೇರೇನೂ ಕೆಲಸಗಳು ಆಗುತ್ತಿಲ್ಲ. ಮೊದಲ ಬಾರಿಗೆ ಜಾತಿ ವ್ಯವಸ್ಥೆಯನ್ನು ವಿರೋಧಿಸಿದ ಕನ್ನಡದ ಕವಿ ಎಂಬುದು ದಾಖಲೆಯ ವಿಷಯವಾಗಿದೆ ಎಂದು ಹೇಳಿದ್ದಾರೆ.
‘ಮನುಷ್ಯ ಜಾತಿ ತಾನೊಂದೆ ವಲಂ’ ಎಂಬ ಪಂಪವಾಣಿ ಎಂದೆಂದಿಗೂ ಪ್ರಸ್ತುತವಾಗಿದೆ. ‘ವಿಕ್ರಮಾರ್ಜುನ ವಿಜಯಂ’ ಕಾವ್ಯದಲ್ಲಿ ಕರ್ಣನ ಪಾತ್ರವನ್ನು ಕುಲಪದ್ಧತಿಯ ಪ್ರತಿರೋಧದ ರೂಪಕವಾಗಿ ಬಳಸಿ ಜಾತಿ ವ್ಯವಸ್ಥೆಯನ್ನು ವಿರೋಧಿಸಿದ ಮೊದಲ ಮನ್ನಣೆ ಮಹಾಕವಿಗೆ ಸಲ್ಲಬೇಕು ಎಂದು ತಿಳಿಸಿದ್ದಾರೆ.
ಪಂಪನ ಹೆಸರಿನಲ್ಲಿ ಪ್ರಾಧಿಕಾರ ಅಥವಾ ಪ್ರತಿಷ್ಠಾನ ಸ್ಥಾಪಿಸಿ, ಜಾತ್ಯತೀತ, ದ್ವೇಷಾತೀತ ಹಾಗೂ ಸೃಜನಶೀಲ ಸ್ವಾತಂತ್ರ್ಯದ ವಿಷಯಗಳನ್ನೂ ಒಳಗೊಂಡಂತೆ ಅನೇಕ ಕಾರ್ಯಕ್ರಮಗಳನ್ನು ಏರ್ಪಡಿಸಬಹುದು. ಅವರ ಸ್ಮಾರಕವನ್ನೂ ನಿರ್ಮಿಸಬಹುದು. ಅಣ್ಣಿಗೇರಿಯಲ್ಲಿರುವ ಪಂಪ ಭವನವನ್ನು ಉನ್ನತೀಕರಿಸಬಹುದು ಎಂದು ಬರಗೂರು ಸಲಹೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.