ಪೀಣ್ಯ ದಾಸರಹಳ್ಳಿ: ವಿಶ್ವ ಧೂಮಪಾನ ನಿಷೇಧ ದಿನದ ಅಂಗವಾಗಿ ಭಾನುವಾರ ಸೋಲದೇವನಹಳ್ಳಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುತ್ತಿದ್ದ ಹಾಗೂ ಗುಟ್ಕಾ ಅಗಿದು ಉಗುಳುತ್ತಿದ್ದವರಿಗೆ ದಂಡ ವಿಧಿಸಿದರು.
ಆತ್ಮೀಯ ಗೆಳೆಯರ ಬಳಗ ಬಡಾವಣೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಇನ್ಸ್ಪೆಕ್ಟರ್ ಕೆ.ಕೆ.ರಘು ನೇತೃತ್ವದಲ್ಲಿ ಆರು ಸಬ್ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿ ಜೊತೆ ದಿಢೀರ್ ಕಾರ್ಯಾಚರಣೆ ಕೈಗೊಂಡರು. ಅನುಮತಿ ಪಡೆಯದೆಯೇ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಮಳಿಗೆಗಳ ಮೇಲೆ ದಾಳಿ ನಡೆಸಿ, ಸಾವಿರಾರು ರೂಪಾಯಿ ಮೌಲ್ಯದ ಉತ್ಪನ್ನಗಳನ್ನು ಜಪ್ತಿ ಮಾಡಿದರು. ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇದುತ್ತಿದ್ದ ಮತ್ತು ಗುಟ್ಕಾ ಉಗುಳುತ್ತಿದ್ದವರನ್ನು ಪತ್ತೆ ಮಾಡಿ 100ಕ್ಕೂ ಅಧಿಕ ಪ್ರಕರಣ ದಾಖಲಿಸಿದರು. ಅಲ್ಲದೇ ತಲಾ ₹200 ದಂಡ ವಿಧಿಸಿದರು.
ಮುಂದಿನ ದಿನಗಳಲ್ಲಿ ಬಾರ್, ಮಾಲ್ಗಳು, ಅಂಗಡಿಗಳ ಮೇಲೆ ದಾಳಿ ನಡೆಸಲಾಗುವುದು, ಶಾಲಾ-ಕಾಲೇಜುಗಳ ಸಮೀಪದ ಚಿಲ್ಲರೆ ಅಂಗಡಿ ಮಳಿಗೆಗಳ ಮೇಲೂ ನಿಗಾ ವಹಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.