ಬೆಂಗಳೂರು: ಸಮಾನ ಶ್ರೇಣಿಗೆ ಸಮಾನ ಪಿಂಚಣಿ (ಒಆರ್ಒಪಿ) ಯೋಜನೆಯನ್ನು ಏಕ ಸದಸ್ಯ ನ್ಯಾಯಾಂಗ ಸಮಿತಿಯ ಶಿಫಾರಸಿನ ಪ್ರಕಾರ ಮರು ನಿಗದಿ ಮಾಡಬೇಕು ಎಂದು ಕೋರಿ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.
ಕೇಂದ್ರ ಸರ್ಕಾರ, ರಕ್ಷಣಾ ಸಚಿವಾಲಯ ಮತ್ತು ಹಣಕಾಸು ಸಚಿವಾಲಯಕ್ಕೆ ನೋಟಿಸ್ ನೀಡಲು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಆದೇಶಿಸಿದೆ.
ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಆಗಿ ನಿವೃತ್ತಿ ಹೊಂದಿರುವ ಜಿ.ಬಿ. ಅತ್ರಿ ಅರ್ಜಿ ಸಲ್ಲಿಸಿದ್ದು, ‘ಯೋಜನೆ ಮಾರ್ಪಡಿಸದೇ ಇದ್ದರೆ 20 ಲಕ್ಷ ಮಾಜಿ ಸೈನಿಕರು ಮತ್ತು 4 ಲಕ್ಷಕ್ಕೂ ಹೆಚ್ಚು ವಿಧವೆಯರಿಗೆ ಅನ್ಯಾಯವಾಗಲಿದೆ’ ಎಂದು ತಿಳಿಸಿದ್ದಾರೆ.
‘ಒಆರ್ಒಪಿ ಎನ್ನುವುದು ಅವರ ನಿವೃತ್ತಿಯ ದಿನಾಂಕ ಲೆಕ್ಕಿಸದೆ, ಅದೇ ಶ್ರೇಣಿಯಲ್ಲಿ ನಿವೃತ್ತಿ ಹೊಂದಿದ ರಕ್ಷಣಾ ಸಿಬ್ಬಂದಿಗೆ ಪಾವತಿಸುವ ಏಕರೂಪದ ಪಿಂಚಣಿ. 2014ರಿಂದ ಜಾರಿಗೆ ತರಲಾಗಿದ್ದು, ಆ ಆದೇಶದ ಪ್ರಕಾರ ಪ್ರತಿ ಐದು ವರ್ಷಗಳಿಗೊಮ್ಮೆ ಮರು ನಿಗದಿ ಮಾಡಬೇಕು. 2019ರ ಜೂನ್ 30ಕ್ಕೆ 5 ವರ್ಷಗಳ ಅವಧಿ ಪೂರ್ಣಗೊಂಡಿದೆ. ಸಮಿತಿಯಿಂದ ವರದಿ ಪಡೆದಿದ್ದರೂ ಈವರೆಗೆ ಮರು ನಿಗದಿ ಮಾಡಿಲ್ಲ’ ಎಂದು ಅರ್ಜಿಯಲ್ಲಿ ವಿವರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.