ಬೆಂಗಳೂರು: ಕ್ರೀಡಾಚಟುವಟಿಕೆಗಳಿಗೆ ಮೀಸಲಾಗಬೇಕಿದ್ದ ಚಂದ್ರಗುಪ್ತ ಮೌರ್ಯ (ಶಾಲಿನಿ) ಆಟದ ಮೈದಾನ ಖಾಸಗಿ ಕಾರ್ಯಕ್ರಮಗಳ ವೇದಿಕೆಯಾಗಿ ಬದಲಾಗಿದೆ. ಇದರಿಂದ ಮಕ್ಕಳು ಹಾಗೂ ಕ್ರೀಡಾಪಟುಗಳು ತೊಂದರೆ ಅನುಭವಿಸುತ್ತಿದ್ದಾರೆ.
ಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಈ ಆಟದ ಮೈದಾನವನ್ನುಬಿಬಿಎಂಪಿ 2012ರಲ್ಲಿ ನಿರ್ಮಿಸಿದೆ. ಪ್ರಾರಂಭದಲ್ಲಿಮಕ್ಕಳು ಹಾಗೂ ಕ್ರೀಡಾಪಟುಗಳು ಖುಷಿಯಿಂದಲೇ ಇದನ್ನುಬಳಸಿಕೊಳ್ಳುತ್ತಿದ್ದರು. ಆದರೆ, ಬಳಿಕ ವಾಣಿಜ್ಯ ಕಾರ್ಯಕ್ರಮಗಳಿಗೆ ಬಾಡಿಗೆ ನೀಡುವ ಬಿಬಿಎಂಪಿಯ ನಿರ್ಧಾರಅವರ ಖುಷಿಯನ್ನು ಕಿತ್ತುಕೊಂಡಿತು.
ಬಾಡಿಗೆ ಪಡೆದುಕೊಂಡವರು ಆಟದಮೈದಾನದ ಮುಕ್ಕಾಲು ಭಾಗದಲ್ಲಿಪೆಂಡಾಲ್ ಹಾಕುತ್ತಿರುವ ಕಾರಣ ಮಕ್ಕಳು ಹಾಗೂ ಕ್ರೀಡಾಪಟುಗಳಿಗೆ ಆಟಕ್ಕೆ ಹೆಚ್ಚು ಜಾಗ ಸಿಗುತ್ತಿಲ್ಲ.ಇರುವ ಕಾಲು ಭಾಗದ ಜಾಗದಲ್ಲಿಯೇ ಆಟ ಆಡಿ ನಿರಾಶೆಯಿಂದ ಹಿಂದಿರುಗುತ್ತಿದ್ದಾರೆ.
‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ವತಿಯಿಂದ ನವೆಂಬರ್ 17ರಂದು ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಜನಸ್ಪಂದನ’ ಕಾರ್ಯಕ್ರಮದಲ್ಲಿಮೈದಾನದವನ್ನು ವಾಣಿಜ್ಯ ಕಾರ್ಯಕ್ರಮಗಳಿಗೆ ಬಾಡಿಗೆ ನೀಡುತ್ತಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ವೇಳೆ ಜಯನಗರ ಶಾಸಕಿ ಸೌಮ್ಯಾ ರೆಡ್ಡಿ ‘ಪಾಲಿಕೆ ಆಯುಕ್ತರ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುತ್ತೇನೆ’ ಎಂದು ಭರವಸೆ ನೀಡಿದ್ದರು. ಆದರೆ, ಇನ್ನೂ ಕಾರ್ಯಕ್ರಮಗಳು ನಡೆಯುತ್ತಿವೆ.
ಶೌಚಾಲಯದ ವ್ಯವಸ್ಥೆ ಇಲ್ಲದ ಕಾರಣ ಕಾರ್ಯಕ್ರಮಕ್ಕೆ ಬಂದವರು ರಂಗಮಂದಿರದ ಗೋಡೆಯ ಮರೆಯಲ್ಲಿಯೇ ಮೂತ್ರ ವಿಸರ್ಜನೆ ಮಾಡುತ್ತಾರೆ. ಆದ್ದರಿಂದಮೈದಾನದಲ್ಲಿ ನಿರ್ಮಿಸಿರುವ ರಂಗಮಂದಿರ ಸೊರಗಿ ಹೋಗಿದ್ದು, ಅದರ ಹಿಂದೆ ದುರ್ವಾಸನೆ ಬೀರುತ್ತಿದೆ.
ಈ ಅವ್ಯವಸ್ಥೆಯ ನಡುವೆಅದರ ಪಕ್ಕದಲ್ಲಿಯೇ ಒಳಾಂಗಣ ಕ್ರೀಡಾಂಗಣವನ್ನು ನಿರ್ಮಿಸಲಾಗುತ್ತಿದೆ. ಅಲ್ಲದೆಕುಳಿತಿಕೊಳ್ಳುವ ಆಸನಗಳ ನಿರ್ಮಾಣ ಕಾಮಗಾರಿಗೆ ತಂದ ಕಲ್ಲುಗಳು ಅಲ್ಲಿಯೇಬಿದ್ದಿವೆ. ಮಕ್ಕಳು ಹಾಗೂ ಕ್ರೀಡಾಪಟುಗಳು ಆಟ ಆಡುವಾಗ ಈ ಕಲ್ಲುಗಳ ಮೇಲೆ ಬಿದ್ದು ಗಾಯ ಮಾಡಿಕೊಂಡ ಘಟನೆಗಳು ಸಹ ನಡೆದಿವೆ ಎನ್ನುತ್ತಾರೆ ಸ್ಥಳೀಯರು.
‘ತಿಂಗಳಲ್ಲಿ ಏನಿಲ್ಲವೆಂದರೂ 4–5 ಕಾರ್ಯಕ್ರಮಗಳು ನಡೆಯುತ್ತವೆ. ಮಧ್ಯಾಹ್ನದ ಮೇಲೆ ಕಾರ್ಯಕ್ರಮಗಳು ನಡೆದರೆ ಮಕ್ಕಳಿಗೆ ಹಾಗೂ ಕ್ರೀಡಾಪಟುಗಳಿಗೆ ಆಟಕ್ಕೆ ಅವಕಾಶ ಸಿಗುವುದಿಲ್ಲ. ಕೆಲವು ವಾಣಿಜ್ಯ ಕಾರ್ಯಕ್ರಮಗಳು ನಡೆಯುವ ವೇಳೆ ಮೈದಾನದ ಪ್ರವೇಶ ದ್ವಾರಗಳನ್ನು ಮುಚ್ಚಲಾಗುತ್ತದೆ’ ಎನ್ನುತ್ತಾರೆ ಹೆಸರೇಳಲು ಇಚ್ಛಿಸದ ಸ್ಥಳೀಯರೊಬ್ಬರು.
‘ಎರಡು ತಿಂಗಳ ಹಿಂದೆಯೇ ವಾಣಿಜ್ಯ ಕಾರ್ಯಕ್ರಮಗಳಿಗೆ ಮೈದಾನ ಬಾಡಿಗೆ ಕೊಡುವುದನ್ನು ನಿಲ್ಲಿಸಿದ್ದೇವೆ. ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಲು ಮಾತ್ರ ಮೈದಾನದಲ್ಲಿ ಅವಕಾಶ ಮಾಡಿಕೊಡಲಾಗುತ್ತಿದೆ’ ಎನ್ನುತ್ತಾರೆ ಬಿಬಿಎಂಪಿ ಅಧಿಕಾರಿಗಳು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.