ADVERTISEMENT

ಕಣ್ಣೂರು ಕೆರೆಯ ಒಡಲಿಗೆ ಕಲುಷಿತ ನೀರು

ಕಲ್ಲು ಕ್ವಾರಿಗಳಲ್ಲಿ ಉತ್ಪತ್ತಿಯಾಗುವ ದ್ರವ ಕೆರೆಗೆ l ಸ್ಥಳೀಯರ ಆತಂಕ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2022, 19:59 IST
Last Updated 16 ಸೆಪ್ಟೆಂಬರ್ 2022, 19:59 IST
ಕಣ್ಣೂರು ಕೆರೆಗೆ ಕಲುಷಿತ ನೀರು ಸೇರುತ್ತಿರುವುದು
ಕಣ್ಣೂರು ಕೆರೆಗೆ ಕಲುಷಿತ ನೀರು ಸೇರುತ್ತಿರುವುದು   

ಕೆ.ಆರ್‌.ಪುರ: ಮಿಟ್ಟಗಾನಹಳ್ಳಿ ಸಮೀಪ ಕಲ್ಲು ‌ಕ್ವಾರಿಗಳಲ್ಲಿ ಉತ್ಪತ್ತಿಯಾಗುವ ದ್ರವ (ಲಿಚೆಟ್) ಕಣ್ಣೂರು ಕೆರೆಗೆ ಸೇರ್ಪಡೆಗೊಂಡು ಕೆರೆ ನೀರು ಕಲುಷಿತಗೊಳ್ಳುತ್ತಿದೆ. ಜಲಚರಗಳ ಪ್ರಾಣಕ್ಕೆ ಕುತ್ತು ಉಂಟಾಗುತ್ತಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ಧಾರೆ.

ಇತ್ತೀಚೆಗೆ ₹13 ಕೋಟಿ ಅನುದಾನದಲ್ಲಿ ತ್ಯಾಜ್ಯ ಘಟಕಕ್ಕೆ ಹೊಂದಿಕೊಂಡಿರುವ ಕಣ್ಣೂರು ಕೆರೆಯಲ್ಲಿ ಹೂಳು ತೆಗೆದು ಅಭಿವೃದ್ಧಿ ಪಡಿಸಲಾಗಿತ್ತು. ಕೆರೆಗೆ ರಾಸಾಯನಿಕ ಮಿಶ್ರಿತ ಲಿಚೆಟ್ ನೀರು ಸೇರ್ಪಡೆಗೊಂಡು ಕೆರೆ ಮಲಿನವಾಗಿದೆ.

ಘನ ತ್ಯಾಜ್ಯದಿಂದ ಉತ್ಪಾದನೆ ಆಗುವ ಲಿಚೆಟ್ ನೀರನ್ನು ಶುದ್ಧೀಕರಿಸಿ ನಂತರ ಕೆರೆಗೆ ಸೇರ್ಪಡೆಯಾಗದಂತೆ ಪ್ರತ್ಯೇಕ ಕಾಲುವೆಯ ಮೂಲಕ ಬೀಡಬೇಕು. ಅದರೆ, ತ್ಯಾಜ್ಯ ಘಟಕದಲ್ಲಿ ಶುದ್ದೀಕರಣ ನಡೆಯುತ್ತಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ADVERTISEMENT

’ಕಣ್ಣೂರು, ಹೊಸೂರುಬಂಡೆ, ಕಾಡು ಸೊಣ್ಣಪ್ಪನಹಳ್ಳಿ, ಮೀಟ್ಟಗಾನಹಳ್ಳಿ ಗ್ರಾಮಗಳಲ್ಲಿ ಅಂತರ್ಜಲ ಕಲುಷಿತಗೊಂಡು ‌ಸಾರ್ವಜನಿಕರು ನಾನಾ ಕಾಯಿಲೆಗಳಿಗೆ ತುತ್ತಾಗಿದ್ದಾರೆ. ಗ್ರಾಮ ಪಂಚಾಯಿತಿ ಬಿಬಿಎಂಪಿಗೆ ಪತ್ರ ಬರೆಯಲಾಗಿದೆ. ತಿಂಗಳಲ್ಲಿ ತ್ಯಾಜ್ಯ ವಿಲೇವಾರಿ ನಿಲ್ಲಿಸದೇ ಇದ್ದಲಿ ಸುತ್ತಮುತ್ತಲಿನ ಗ್ರಾಮಸ್ಥರೆಲ್ಲರೂ ಸೇರಿ ತೀವ್ರ ಹೋರಾಟ ನಡೆಸುತ್ತೇವೆ‘ ಎಂದು ಗ್ರಾಮ ಪಂಚಾಯಿತಿ ಸದಸ್ಯ ನಂಜೇಗೌಡ ಎಚ್ಚರಿಕೆ
ನೀಡಿದರು.

ಅವೈಜ್ಞಾನಿಕ ತ್ಯಾಜ್ಯ ಘಟಕವನ್ನು ಸ್ಥಗಿತಗೊಳಿಸಿ ಪರಿಸರ ಸಂರಕ್ಷಣೆ ಮಾಡಬೇಕು. ಜನರ ಜೀವನದ ಜೊತೆ ಚೆಲ್ಲಾಟ ಆಡುತ್ತಿರುವ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಸರ್ಕಾರವು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ಮಧು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.