ಬೆಂಗಳೂರು: ರಸ್ತೆ ಅಪಘಾತಗಳಲ್ಲಿ ಇಬ್ಬರು ಪ್ರಾಣತೆತ್ತ ಘಟನೆ ನೋಡಿ ಬೇಸತ್ತ ಪೊಲೀಸರು ತಾವೇ ರಸ್ತೆ ವಿಭಜಕ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಬನಶಂಕರಿ 6ನೇ ಹಂತದ ದಾಸೇಗೌಡನ ಪಾಳ್ಯದ 100 ಅಡಿ ರಸ್ತೆಯಲ್ಲಿ ಪೊಲೀಸರು ಸ್ಥಳೀಯರ ನೆರವಿನೊಂದಿಗೆ ರಸ್ತೆ ವಿಭಜಕ ನಿರ್ಮಿಸಿದ್ದಾರೆ. ಸುಮಾರು 2 ಕಿಲೋಮೀಟರ್ ದೂರದವರೆಗೆ ವಿಭಜಕ ನಿರ್ಮಾಣವಾಗಿದೆ. ಶುಕ್ರವಾರ ಬೆಳಿಗ್ಗೆಯಿಂದಲೇ ಕುಮಾರಸ್ವಾಮಿ ಲೇಔಟ್ ಸಂಚಾರ ಠಾಣೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ ಕೃಷ್ಣಯ್ಯ, ಹೆಡ್ಕಾನ್ಸ್ಟೇಬಲ್ಗಳಾದ ಶ್ರೀನಿವಾಸ್, ಅಶೋಕ್ ಕುಮಾರ್ ಸೇರಿ ರಸ್ತೆ ಮಧ್ಯೆ ಸಿಮೆಂಟ್ ಬ್ಲಾಕ್ಗಳನ್ನು ಇರಿಸಿದರು.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಈ ರಸ್ತೆ ನಿರ್ಮಿಸಿದೆ. ನಿರ್ಮಾಣದ ವೇಳೆ ವಿಭಜಕ ನಿರ್ಮಾಣಕ್ಕೆಂದು ತಂದ ಬ್ಲಾಕ್ಗಳನ್ನು ರಸ್ತೆಬದಿ ಹಾಕಲಾಗಿತ್ತು. ಅದನ್ನು ಬಳಸಿ ವಿಭಜಕ ನಿರ್ಮಿಸಲಾಗಿದೆ ಎಂದು ಸ್ಥಳೀಯರು ತಿಳಿಸಿದರು.
‘ರಸ್ತೆ ವಿಭಜಕ ನಿರ್ಮಿಸುವಂತೆ ಇಲಾಖೆ ವತಿಯಿಂದ ಬಿಡಿಎಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಸ್ಪಂದಿಸಿರಲಿಲ್ಲ. ಕೊನೆಗೆ ಹಿರಿಯ ಅಧಿಕಾರಿಗಳ ಸಲಹೆಯಂತೆ ನಾವೇ ಕೆಲಸಕ್ಕಿಳಿದಿದ್ದೇವೆ’ ಎಂದು ಕೃಷ್ಣಯ್ಯ ಹೇಳಿದರು.
ಸಂಜೆ ವೇಳೆ ರೇಡಿಯಲ್ ಸ್ಟಿಕ್ಕರ್ ಅಳವಡಿಸುವ ಕಾರ್ಯ ನಡೆದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.