ADVERTISEMENT

ಬೆಂಗಳೂರು: ಹೊಯ್ಸಳ ಸಿಬ್ಬಂದಿಯಿಂದ ಬೆಳಿಗ್ಗೆ ರಕ್ಷಣೆ, ರಾತ್ರಿ ಆತ್ಮಹತ್ಯೆ

ಆತ್ಮಹತ್ಯೆ ಮಾಡಿಕೊಂಡ ಪಿಎಸ್‌ಐ ಪತ್ನಿ, ಗೋವಿಂದಪುರ ಠಾಣೆ ಪೊಲೀಸರಿಂದ ತನಿಖೆ

​ಪ್ರಜಾವಾಣಿ ವಾರ್ತೆ
Published 20 ಮೇ 2025, 20:31 IST
Last Updated 20 ಮೇ 2025, 20:31 IST
<div class="paragraphs"><p>ಆತ್ಮಹತ್ಯೆ (ಪ್ರಾತಿನಿಧಿಕ ಚಿತ್ರ)</p></div>

ಆತ್ಮಹತ್ಯೆ (ಪ್ರಾತಿನಿಧಿಕ ಚಿತ್ರ)

   

ಬೆಂಗಳೂರು: ಕೆ.ಜಿ.ಹಳ್ಳಿ ಪೊಲೀಸ್‌ ಠಾಣೆಯ ಸಬ್ ಇನ್‌ಸ್ಪೆಕ್ಟರ್‌ ನಾಗರಾಜ್ ಅವರ ಪತ್ನಿ ಶಾಲಿನಿ ಅವರು ಎಚ್‌ಬಿಆರ್ ಬಡಾವಣೆ ಮನೆಯಲ್ಲಿ ನೇಣುಬಿಗಿದುಕೊಂಡು ಸೋಮವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಾಲಿನಿ ಪೋಷಕರು ಗೋವಿಂದಪುರ ಠಾಣೆಗೆ ದೂರು ನೀಡಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.

‘ಪತಿ ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಎಂದು ಆರೋಪಿಸಿ, ಶಾಲಿನಿ ಅವರು ಸೋಮವಾರ ಬೆಳಿಗ್ಗೆ ರೈಲಿಗೆ ಸಿಲುಕಿ ಸಾಯುತ್ತೇನೆ ಎಂಬುದಾಗಿ ಹೇಳಿ ಮನೆಯಿಂದ ಹೋಗಿದ್ದರು. ಹೊಯ್ಸಳ ಸಿಬ್ಬಂದಿಗೆ ಮಾಹಿತಿ ತಿಳಿದು ಶಾಲಿನಿ ಅವರನ್ನು ರಕ್ಷಿಸಿ ಮನೆಗೆ ಕರೆದುಕೊಂಡು ಬಂದುಬಿಟ್ಟಿದ್ದರು. ರಾತ್ರಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಗೊತ್ತಾಗಿದೆ.

ADVERTISEMENT

ಮೃತ ಶಾಲಿನಿ ಹಾಗೂ ಪಿಎಸ್ಐ ನಾಗರಾಜ್ ಇಬ್ಬರು ಇಳಕಲ್ ಮೂಲದವರು. ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗ ಒಟ್ಟಿಗೆ ಮನೆಪಾಠಕ್ಕೂ ತೆರಳುತ್ತಿದ್ದರು. ಶಿಕ್ಷಣ ಮುಗಿದ ಮೇಲೆ ಶಾಲಿನಿ ಅವರು ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಕ್ಕೆ ಸೇರಿದ್ದರು. ನಾಗರಾಜ್‌ ಅವರು ಪಿಎಸ್‌ಐ ಪರೀಕ್ಷೆ ತೆಗೆದುಕೊಂಡಾಗ ಶಾಲಿನಿ ಅವರು ಆರ್ಥಿಕ ಸಹಾಯ ಮಾಡಿದ್ದರು’ ಎಂದು ಮೂಲಗಳು ಹೇಳಿವೆ.

ಮೊದಲ ಪತಿಗೆ ವಿಚ್ಛೇದನ: ಶಾಲಿನಿ ಹಾಗೂ ನಾಗರಾಜ್‌ ಅವರ ಮಧ್ಯೆ ಪ್ರೇಮಾಂಕರುವಾಗಿತ್ತು. ಮೊದಲ ಪತಿಗೆ ಶಾಲಿನಿ ಅವರು ವಿಚ್ಛೇದನ ನೀಡಿ ಕಳೆದ ಆಗಸ್ಟ್‌ನಲ್ಲಿ ನಾಗರಾಜ್ ಅವರನ್ನು ಮದುವೆ ಆಗಿದ್ದರು ಎಂದು ಮೂಲಗಳು ತಿಳಿಸಿವೆ.

‘ಶಾಲಿನಿ ಹಾಗೂ ನಾಗರಾಜ್ ಅವರ ಮಧ್ಯೆ ಇತ್ತೀಚೆಗೆ ಮನಸ್ತಾಪ ಆರಂಭವಾಗಿತ್ತು. ಪತಿ ನಾಗರಾಜ್ ಅವರು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಎಂದು ಶಾಲಿನಿ ಹೇಳುತ್ತಿದ್ದರು. ಈ ಸಂಬಂಧ ಕೋಣನಕುಂಟೆ ಠಾಣೆಗೂ ದೂರು ನೀಡಿದ್ದರು. ಈ ಸಂಬಂಧ ಹಿರಿಯ ಅಧಿಕಾರಿಗಳು ಆಂತರಿಕ ತನಿಖೆ ನಡೆಸಿದ್ದರು. ಎರಡು ತಿಂಗಳಿಂದ ದಂಪತಿ ಮಧ್ಯೆ ಜಗಳ ವಿಕೋಪಕ್ಕೆ ಹೋಗಿತ್ತು. ನಾಗರಾಜ್ ಅವರು ಬೇರೆ ಮನೆಗೆ ತೆರಳಿ ವಾಸ ಮಾಡುತ್ತಿದ್ದರು’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.