ADVERTISEMENT

ತಿಗಳರ ಕುಲಶಾಸ್ತ್ರೀಯ ಅಧ್ಯಯನಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2021, 16:55 IST
Last Updated 2 ಸೆಪ್ಟೆಂಬರ್ 2021, 16:55 IST
ಪಿ.ಆರ್.ರಮೇಶ್
ಪಿ.ಆರ್.ರಮೇಶ್   

ಬೆಂಗಳೂರು: ತಿಗಳ ಸಮುದಾಯ ಮತ್ತು ಅದರ ಉಪ ಜಾತಿಗಳ ಕುಲಶಾಸ್ತ್ರೀಯ ಅಧ್ಯಯನ ನಡೆಸಬೇಕು ಎಂದು ವಿಧಾನ ಪರಿಷತ್ತಿನ ಸದಸ್ಯ ಪಿ.ಆರ್. ರಮೇಶ್ ಒತ್ತಾಯಿಸಿದ್ದಾರೆ.

ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಪತ್ರ ಬರೆದಿರುವ ಅವರು, ‘ವಹ್ನಿಕುಲ ಕ್ಷತ್ರಿಯ, ಅಗ್ನಿಕುಲ ಕ್ಷತ್ರಿಯ, ಶಂಭುಕುಲ ಕ್ಷತ್ರಿಯ, ಅಗ್ನಿವನ್ನಿ, ಧರ್ಮರಾಜ ಕಾಪು, ತಿಗಳ, ಪಳ್ಳಿ, ಪನ್ನುಗೊಂಡರ್, ವನ್ನಿಯಾರ್, ಪಡಿಯಾಚಿ, ತಿಗ್ಲರ್... ಹೀಗೆ ಉಪ ಜಾತಿಗಳನ್ನು ಈ ಸಮುದಾಯ ಒಳಗೊಂಡಿದೆ. ಕರ್ನಾಟಕದ ಮೂಲ ನಿವಾಸಿಗಳಲ್ಲಿ ತಿಗಳ ಸಮುದಾಯವೂ ಒಂದು’ ಎಂದು ವಿವರಿಸಿದ್ದಾರೆ.

ರಾಜ್ಯದ 16 ಜಿಲ್ಲೆಗಳಲ್ಲಿ ಈ ಸಮುದಾಯದ ಜನರಿದ್ದು, ಸರ್ಕಾರ ಈ ಸಮುದಾಯವನ್ನು ಹಿಂದುಳಿದ ಜಾತಿಗಳ ಪಟ್ಟಿಯಲ್ಲಿ ಪ್ರವರ್ಗ 2ಎ ಎಂದು ಗುರುತಿಸಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ರಾಜಕೀಯ ಸ್ಥಾನಮಾನ ಸಿಗದೆ ಸಮುದಾಯ ವಂಚಿತವಾಗಿದೆ. ಶೈಕ್ಷಣಿಕವಾಗಿಯೂ ಹಿಂದುಳಿದಿದೆ ಎಂದು ಹೇಳಿದ್ದಾರೆ.

ADVERTISEMENT

‘ತಿಗಳ ಸಮುದಾಯ ಮತ್ತು ಅದರ ಉಪ ಜಾತಿಗಳ ಐತಿಹಾಸಿಕ ಹಿನ್ನೆಲೆ, ಶೈಕ್ಷಣಿಕ ಮತ್ತು ಸಾಮಾಜಿಕ ಸ್ಥಾನಮಾನದ ಸ್ಥಿತಿ, ಭಾಷೆ (ತಿಗಳರ ಲಿಪಿ) ಒಳಗೊಂಡ ಸಮಗ್ರ ಕುಲಶಾಸ್ತ್ರೀಯ ಅಧ್ಯಯನವನ್ನು ಬೆಂಗಳೂರು ವಿಶ್ವವಿದ್ಯಾಲಯದ ಮೂಲಕ ನಡೆಸಬೇಕು. ಅಧ್ಯಯನ ವರದಿ ಆಧರಿಸಿ ತಿಗಳ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕು’ ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.