ಬೆಂಗಳೂರು:‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಆಯೋಜಿಸಿರುವ 12ನೇ ಆವೃತ್ತಿಯ ‘ಎಡ್ಯುವರ್ಸ್: ಜ್ಞಾನದೇಗುಲ’ ಶೈಕ್ಷಣಿಕ ಮೇಳ ವಿದ್ಯಾರ್ಥಿಗಳ ಹಾಗೂ ಪೋಷಕರ ಮೆಚ್ಚುಗೆಗೆ ಪಾತ್ರವಾಯಿತು. ಆಯ್ದ ಕೆಲವು ವಿದ್ಯಾರ್ಥಿಗಳ ಹಾಗೂ ಪೋಷಕರ ಪ್ರತಿಕ್ರಿಯೆಗಳು ಇಲ್ಲಿವೆ.
ಉತ್ತಮ ಕೋರ್ಸ್ಗಳನ್ನು ಅರಸಿ ಇಲ್ಲಿಗೆ ಬಂದಿದ್ದೇನೆ. ಯಾವ ಕೋರ್ಸ್ಗೆ ಎಷ್ಟು ಬೇಡಿಕೆ ಇದೆ, ಏನೆಲ್ಲ ಉದ್ಯೋಗಾವಕಾಶಗಳಿವೆ ಎಂಬುದನ್ನು ತಿಳಿಯಲು ಸಾಧ್ಯವಾಯಿತು. ನನಗೆ ಇಷ್ಟವಾದ ಕೋರ್ಸ್ಗಳನ್ನು ಪಟ್ಟಿ ಮಾಡಿಕೊಂಡಿದ್ದೇನೆ.ವಿಶೇಷ ಕೋರ್ಸ್ಗಳ ಬಗ್ಗೆ ಸಾಕಷ್ಟು ತಿಳಿದುಕೊಂಡೆ.
।ಪ್ರಥಮ್, ಮಾಗಡಿ ರಸ್ತೆ
ಭಿನ್ನ ಕೋರ್ಸ್ಗಳಿಗೆ ಯಾವ ರೀತಿಯ ಶುಲ್ಕಗಳಿವೆ ಎಂಬುದು ತಿಳಿಯಿತು. ಹೊಸ ಕೋರ್ಸ್ಗಳ ಬಗ್ಗೆಯೂ ಮಾಹಿತಿ ದೊರೆಯಿತು. ಸಾಕಷ್ಟು ಕಾಲೇಜುಗಳು ಇಲ್ಲಿರುವುದರಿಂದ ಉಪಯುಕ್ತ ಮಾಹಿತಿ ಲಭ್ಯವಾಯಿತು. ಕಾಮೆಡ್–ಕೆ, ಸಿಇಟಿ ಬಗೆಗಿನ ಹಲವು ಸಂದೇಹಗಳು ಸಂಪನ್ಮೂಲ ವ್ಯಕ್ತಿಗಳ ಸಲಹೆ–ಸೂಚನೆಗಳಿಂದ ಬಗೆಹರಿದಿವೆ.
।ಸುಮಿತ್, ಹೆಬ್ಬಾಳ
ಶೈಕ್ಷಣಿಕ ಮೇಳದಿಂದ ಉಪಯುಕ್ತ ಮಾಹಿತಿ ದೊರೆಯಿತು.ಕೌನ್ಸೆಲಿಂಗ್ಗೆ ತಯಾರಿ, ಅಗತ್ಯ ದಾಖಲೆಗಳು, ಅಂತಿಮವಾಗಿ ಸೀಟು ಪಡೆಯಲು ಅನುಸರಿಸಬೇಕಾದ ವಿಧಾನಗಳ ಬಗ್ಗೆ ಕೆಲವು ಗೊಂದಲಗಳಿದ್ದವು. ಅವುಗಳಿಗೆಲ್ಲ ಪರಿಹಾರ ದೊರೆಯಿತು. ಕಾಲೇಜುಗಳ ಕಡೆಯಿಂದಲೂ ಅಗತ್ಯ ಮಾಹಿತಿ ದೊರೆಯಿತು.
।ಇಂದುಶ್ರೀ, ಆರ್.ಟಿ. ನಗರ
ಸಿಇಟಿ ಪ್ರಕ್ರಿಯೆ ಬಗ್ಗೆ ಉಪಯುಕ್ತವಾದ ಮಾಹಿತಿಗಳು ದೊರೆತವು. ಅದೇ ರೀತಿ, ಹೊಸ ಕೋರ್ಸ್ಗಳ ವಿವರ ಸಿಕ್ಕವು. ಒಂದೇ ಸೂರಿನಡಿ ಹಲವು ಕಾಲೇಜುಗಳ ಮಳಿಗೆ ಇರುವುದರಿಂದ ಗೊಂದಲಗಳು ದೂರವಾದವು. ಉತ್ತಮವಾಗಿ ಆಯೋಜಿಸಲಾಗಿದೆ.ಸಂಪನ್ಮೂಲ ವ್ಯಕ್ತಿಗಳು ನೀಡಿದ ಮಾಹಿತಿಯಿಂದ ಗೊಂದಲಗಳು ಪರಿಹಾರವಾಗಿವೆ.
।ಅನಿತಾ, ಕಮಲಾನಗರ
ಒಂದೇ ಸೂರಿನಡಿ ಹಲವು ಕಾಲೇಜುಗಳ ಮಳಿಗೆ ಇರುವುದರಿಂದ ಗೊಂದಲಗಳು ದೂರವಾದವು.ಕಾಲೇಜುಗಳ ಬಗ್ಗೆ ಅಂತರ್ಜಾಲದಲ್ಲಿ ಮಾಹಿತಿ ಸಿಕ್ಕರೂ ನಮ್ಮ ಸಂದೇಹಗಳನ್ನು ದೂರ ಮಾಡಿಕೊಳ್ಳಲು ಸಾಧ್ಯವಾಗದು. ವೈದ್ಯಕೀಯ ಕೋರ್ಸ್ಪ್ರವೇಶ ಶುಲ್ಕ ಸೇರಿದಂತೆ ಹಲವು ವಿಷಯಗಳ ಬಗ್ಗೆ ವಿಚಾರಿಸಿ, ಮಾಹಿತಿ ಪಡೆದುಕೊಂಡೆವು.
।ಶೋಭಾದೇವಿ, ರಾಮಮೂರ್ತಿನಗರ
ಸಿಇಟಿ ಹಾಗೂ ಕಾಮೆಡ್–ಕೆ ಕುರಿತಾದ ವಿಚಾರಗೋಷ್ಠಿಗಳು ಸಾಕಷ್ಟು ವಿಷಯಗಳನ್ನು ಮನವರಿಕೆ ಮಾಡಿಕೊಟ್ಟವು. ಇಂತಹುದೊಂದು ಕಾರ್ಯಕ್ರಮಕ್ಕಾಗಿ ಕಾಯುತ್ತಿದ್ದೆವು. ಈ ಸಮಯದಲ್ಲಿ ಸರಿಯಾದ ಮಾರ್ಗದರ್ಶನದ ಕೊರತೆಯನ್ನು ಈ ಮೇಳ ನೀಗಿಸಿತು.
।ಸೊಲಾಕ್ರಿಸ್ಪಿನಾ, ವಿವೇಕನಗರ
ಯಾವೆಲ್ಲ ಅಡ್ವಾನ್ಸ್ಡ್ ಕೋರ್ಸ್ಗಳು ಬಂದಿವೆ ಎನ್ನುವುದನ್ನು ತಿಳಿದುಕೊಳ್ಳಲು ಸಹಾಯಕವಾಯಿತು. ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ರೀತಿ ಕಾರ್ಯಕ್ರಮಗಳು ಮಕ್ಕಳ ಗೊಂದಲ ಬಗೆಹರಿಸಲು ನೆರವಾಗುತ್ತವೆ.ಇಲ್ಲಿಗೆ ಬಂದಮೇಲೆ ಸಾಕಷ್ಟು ವಿಷಯಗಳು ಮನದಟ್ಟಾದವು.
।ಅಮನ್, ಮತ್ತಿಕೆರೆ
ಮಗಳು ದ್ವಿತೀಯ ಪಿ.ಯು. ಅಧ್ಯಯನ ಮಾಡುತ್ತಿದ್ದಾಳೆ. ಪಿ.ಯು. ಬಳಿಕ ಏನೆಲ್ಲ ಆಯ್ಕೆಗಳಿರಲಿವೆ ಎನ್ನುವ ಕುರಿತು ತಿಳಿದುಕೊಂಡೆ. ಇದೇ ಮೊದಲ ಬಾರಿಗೆ ಶೈಕ್ಷಣಿಕ ಮೇಳಕ್ಕೆ ಬಂದಿದ್ದೇನೆ. ತುಂಬಾ ಖುಷಿಯಾಯಿತು.ವಿವಿಧ ಎಂಜಿನಿಯರಿಂಗ್, ವೈದ್ಯಕೀಯ ಕಾಲೇಜಿನ ಚಿತ್ರಣ ದೊರೆತಿದೆ.
।ಅರವಿಂದ್, ವಿದ್ಯಾರಣ್ಯಪುರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.