ಪೀಣ್ಯ ದಾಸರಹಳ್ಳಿ: ಶುಭ ಸಮಾರಂಭಗಳಲ್ಲಿ ಒಳ್ಳೆಯ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿ ಪುಸ್ತಕ ಸಂಸ್ಕೃತಿ ಬೆಳೆಸಲು ಪ್ರೋತ್ಸಾಹಿಸಬೇಕು. ಇದರಿಂದ ಓದುವ ಹವ್ಯಾಸ ಬೆಳೆಸುವ ಆದರ್ಶ ಕಾರ್ಯ ಎಂದು ಶಾಸಕ ಎಸ್. ಮುನಿರಾಜು ತಿಳಿಸಿದರು.
ಬಾಗಲಗುಂಟೆಯಲ್ಲಿ ನಡೆದ ‘ಅಭಿಮಾನೋತ್ಸವ’ದಲ್ಲಿ ನೂತನ ವರ್ಷ 2024ರ ‘ಪ್ರಜಾವಾಣಿ’ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದರು.
‘ಸಂಘ–ಸಂಸ್ಥೆಗಳು, ಗಣ್ಯರು, ಸಾಹಿತಿಗಳು, ಅಭಿಮಾನಿಗಳು ಆಗಮಿಸಿ ಪುಸ್ತಕಗಳನ್ನು ನೀಡಿ ಶುಭ ಕೋರಿದ್ದಾರೆ. ಈ ಪುಸ್ತಕಗಳನ್ನು ನಾನು ಸರ್ಕಾರಿ ಶಾಲಾ-ಕಾಲೇಜುಗಳಿಗೆ ನೀಡುವ ಮೂಲಕ ಪುಸ್ತಕ ಪ್ರೀತಿಯನ್ನು ಬೆಳೆಸಲು ನೆರವಾಗುತ್ತೇನೆ’ ಎಂದರು.
ಸಾಹಿತಿ ವೈ.ಬಿ.ಎಚ್. ಜಯದೇವ್ ಮಾತನಾಡಿ, ‘ಇದೊಂದು ಸ್ವಾಗತಾರ್ಹ ಬದಲಾವಣೆ. ಸಭೆ ಸಮಾರಂಭಗಳಲ್ಲಿ ಶಾಲು, ಹಾರ, ಪೇಟಗಳ ಬದಲಾಗಿ ಕನ್ನಡ ಪುಸ್ತಕಗಳನ್ನು ಉಡುಗೊರೆಯಾಗಿ ಪಡೆಯುವ ಈ ಸಂಪ್ರದಾಯವು ನಿಜಕ್ಕೂ ಪುಸ್ತಕ ಸಂಸ್ಕೃತಿಯೇ ಸರಿ. ನಮ್ಮ ಕ್ಷೇತ್ರದ ಶಾಸಕರು ತಮ್ಮ ಹುಟ್ಟಿದ ಹಬ್ಬದ ಆಚರಣೆಯ ಸಂದರ್ಭದಲ್ಲಿ ಪುಸ್ತಕಗಳನ್ನು ಉಡುಗೊರೆಯಾಗಿ ಪಡೆಯುವ ಈ ವಿನೂತನ ಸಂಪ್ರದಾಯವು ನಿಜಕ್ಕೂ ಸ್ತುತ್ಯಾರ್ಹ’ ಎಂದರು.
ಕತೆಗಾರ ಕಂನಾಡಿಗಾ ನಾರಾಯಣ ಮಾತನಾಡಿ, ‘ಜನಪ್ರತಿನಿಧಿಗಳು ತಮ್ಮ ಜನುಮದಿನ, ಶುಭ ಸಮಾರಂಭಗಳಲ್ಲಿ ಈ ರೀತಿ ಪುಸ್ತಕ ಉಡುಗೊರೆಯಾಗಿ ಪಡೆದರೆ ಸಾಹಿತಿಗಳು ಮತ್ತು ಪ್ರಕಾಶಕರಿಗೆ ಪ್ರೋತ್ಸಾಹಿದಂತಾಗುತ್ತದೆ’ ಎಂದರು.
ಕ್ಷೇತ್ರದ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ವಿಜಯಕುಮಾರ್, ಭರತ್ ಸೌಂದರ್ಯ ನೇತೃತ್ವದಲ್ಲಿ ಸಪ್ತಗಿರಿ ಆಸ್ಪತ್ರೆಯಲ್ಲಿ ಶಾಸಕ ಮುನಿರಾಜು ಅವರು ಹಣ್ಣು ಹಂಪಲು ವಿತರಣೆ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.