ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಅವರು ನಗರದ ನಾಗವಾರದ ಅರೇಬಿಕ್ ಕಾಲೇಜಿನಲ್ಲಿ ಮುಸ್ಲಿಂ ಧರ್ಮಗುರು ಮುಫ್ತಿ ಸಗೀರ್ ಅಹಮದ್ ಅವರನ್ನು ಬುಧವಾರ ಭೇಟಿ ಮಾಡಿ ಆಶೀರ್ವಾದ ಪಡೆದರು. ಕೊರೊನಾದಿಂದ ಮುಕ್ತಿ ನೀಡುವಂತೆ ಧರ್ಮಗುರುಗಳು ಅಲ್ಲಾಹುವನ್ನು ಪ್ರಾರ್ಥಿಸಿದರು.
ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ ಶಿವಕುಮಾರ್, ‘ಅರೇಬಿಕ್ ವಿದ್ಯಾಸಂಸ್ಥೆ ಧರ್ಮ ಹಾಗೂ ಶಾಂತಿ ಕಾಪಾಡುವ ಪವಿತ್ರ ಸಂಸ್ಥೆ. ಇದರ ಪ್ರಮುಖರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಲು ಬಂದಿದ್ದೇನೆ. ಎಲ್ಲ ಧರ್ಮಗಳನ್ನು ಗೌರವಿಸುತ್ತಾ ಜಾತ್ಯತೀತ ತತ್ವಕ್ಕೆ ಒತ್ತು ಕೊಟ್ಟಿದ್ದೇನೆ. ಎಲ್ಲ ಧರ್ಮಗಳ ಉತ್ತಮ ವಿಚಾರ, ಭಾವನೆಗಳ ಜತೆ ನಿಲ್ಲುತ್ತೇವೆ’ ಎಂದರು.
‘ಕೊರೊನಾ ಸೋಂಕು ಹರಡುವಿಕೆ ಸಂಬಂಧ ರಾಜಕೀಯ ಉದ್ದೇಶದಿಂದ ಒಂದು ಕೋಮಿನ ವಿರುದ್ಧ ಆರೋಪ ಮಾಡಲಾಯಿತು. ಅದಕ್ಕೆ ನಾವು ಅವಕಾಶ ನೀಡುವುದಿಲ್ಲ. ಕಾಂಗ್ರೆಸ್ ಎಲ್ಲರ ಹಿತ ಕಾಯಲು ಬದ್ಧವಾಗಿದೆ. ಸಮಾಜದ ಎಲ್ಲಾ ವರ್ಗದವರನ್ನು ಒಂದೇ ರೀತಿ ಕಾಣಬೇಕು. ಯಾರೋ ಒಂದಿಬ್ಬರು ಮಾಡುವ ತಪ್ಪಿಗೆ ಇಡೀ ಸಮುದಾಯವನ್ನು ದೂಷಿಸಬಾರದು’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.