ಬೆಂಗಳೂರು: ‘ರೊಬೊಟಿಕ್ ತಂತ್ರಜ್ಞಾನದ ನೆರವಿನಿಂದ ಒಂಬತ್ತು ತಿಂಗಳಲ್ಲಿ 500 ಬೆನ್ನುಮೂಳೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಈ ಅತ್ಯಾಧುನಿಕ ತಂತ್ರಜ್ಞಾನದ ನೆರವಿನಿಂದ ನಿಖರ ಶಸ್ತ್ರಚಿಕಿತ್ಸೆ ಸಾಧ್ಯವಾಗುತ್ತಿರುವುದರ ಜತೆಗೆ ರೋಗಿಯೂ ಬೇಗ ಚೇತರಿಸಿಕೊಳ್ಳುತ್ತಾನೆ’ ಎಂದು ಮಣಿಪಾಲ್ ಆಸ್ಪತ್ರೆಯ ಬೆನ್ನುಮೂಳೆ ಶಸ್ತ್ರಚಿಕಿತ್ಸಕ ಡಾ.ಎಸ್. ವಿದ್ಯಾಧರ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆನ್ನು ಮೂಳೆ ಸಂಬಂಧಿ ಸಮಸ್ಯೆಗಳು ವ್ಯಕ್ತಿಯ ದೈನಂದಿನ ಜೀವನದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತವೆ. ವಯಸ್ಸಾದಂತೆ ಬೆನ್ನುಮೂಳೆ ತನ್ನ ಗಡಸುತನವನ್ನು ಕಳೆದುಕೊಳ್ಳುತ್ತದೆ. ಬೆನ್ನು ಹುರಿ ಸೇರಿ ವಿವಿಧ ಶಸ್ತ್ರಚಿಕಿತ್ಸೆಗಳನ್ನು ಸಾಂಪ್ರದಾಯಿಕ ವಿಧಾನದಲ್ಲಿ ನಡೆಸಿದರೆ ರೋಗಿ ಚೇತರಿಸಿಕೊಳ್ಳಲು ಹೆಚ್ಚಿನ ಅವಧಿ ಅಗತ್ಯ. ರೊಬೊಟಿಕ್ ಶಸ್ತ್ರಚಿಕಿತ್ಸೆಯಲ್ಲಿ ಗಾಯದ ಪ್ರಮಾಣವೂ ಕಡಿಮೆ ಇರುವುದರಿಂದ ವ್ಯಕ್ತಿ ಬೇಗ ಚೇತರಿಸಿಕೊಳ್ಳುತ್ತಾನೆ. ಇದರಿಂದಾಗಿ ಆಸ್ಪತ್ರೆ ವಾಸದ ಅವಧಿಯೂ ಕಡಿತ ಆಗಲಿದೆ’ ಎಂದು ಹೇಳಿದರು.
‘ವಯಸ್ಕರ ಜತೆಗೆ ಮಕ್ಕಳು, ವೃದ್ಧರಿಗೂ ರೊಬೊಟಿಕ್ ತಂತ್ರಜ್ಞಾನದ ನೆರವಿನಿಂದ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ‘ಸ್ಕೋಲಿಯೋಸಿಸ್’ ಸಮಸ್ಯೆ ಎದುರಿಸುತ್ತಿದ್ದ ತುಮಕೂರಿನ ಸಿದ್ದನಹಳ್ಳಿಯ ಯುವತಿಗೆ ಬೆನ್ನು ಹುರಿ 120 ಡಿಗ್ರಿಗಳಷ್ಟು ಬಾಗಿತ್ತು. ಆಕೆಗೆ ರೊಬೊಟಿಕ್ ತಂತ್ರಜ್ಞಾನದ ನೆರವಿನಿಂದ 8 ಗಂಟೆಗಳ ಅವಧಿಯಲ್ಲಿ ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಆರು ಗಂಟೆಗಳ ಬಳಿಕ ಅವಳು ಎಲ್ಲರಂತೆ ನಡೆಯಲು ಸಾಧ್ಯವಾಯಿತು’ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.