ಬೆಂಗಳೂರು: ‘ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ದಿನಸಿ ಕಿಟ್ ವಿತರಣೆಯಲ್ಲಿ ಭಾರಿ ಅಕ್ರಮ ನಡೆದಿದ್ದು, ಈ ಬಗ್ಗೆ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯಬೇಕು’ ಎಂದು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ಆಗ್ರಹಿಸಿದೆ.
ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಐಎನ್ಟಿಯುಸಿ ಸಂಘಟನೆಯ ಶ್ಯಾಮಣ್ಣ ರೆಡ್ಡಿ,‘ಮಂಡಳಿಯುಸುಮಾರು ₹2,500 ಕೋಟಿ ಸೆಸ್ ಹಣದಿಂದ ಕೆಲವು ಪರಿಹಾರ ಕಾರ್ಯಗಳನ್ನು ಕೈಗೊಂಡಿತ್ತು. ಕಟ್ಟಡ ಕಾರ್ಮಿಕರಿಗಾಗಿ ಮಂಡಳಿ 21 ಲಕ್ಷ ದಿನಸಿ ಕಿಟ್ಗಳನ್ನು ಹಂಚಿಕೆ ಮಾಡಿರುವುದಾಗಿ ವರದಿಯಲ್ಲಿದೆ. ಆದರೆ, ವಿತರಣೆಯಾಗಿರುವ ದಿನಸಿ ಹಾಗೂ ಸುರಕ್ಷಾ ಕಿಟ್ಗಳ ಗುಣಮಟ್ಟ ತೀರಾ ಕಳಪೆಯಾಗಿದೆ’ ಎಂದು ಆರೋಪಿಸಿದರು.
‘ಮಂಡಳಿಯಲ್ಲಿ ಕೋಟ್ಯಂತರ ಹಣ ಖರ್ಚು ಮಾಡಿ ದುಬಾರಿ ಕಾರುಗಳನ್ನು ಖರೀದಿಸಲಾಗಿದೆ. ಕೋವಿಡ್ ಪರಿಸ್ಥಿತಿಯಲ್ಲಿ ಈ ರೀತಿ ದುಂದುವೆಚ್ಚದ ಅಗತ್ಯ ಏನಿತ್ತು?’ ಎಂದು ಪ್ರಶ್ನಿಸಿದರು.
ಎಐಯುಟಿಯುಸಿ ಸಂಘಟನೆಯ ಕೆ.ವಿ.ಭಟ್,‘ಕಟ್ಟಡ ಕಾರ್ಮಿಕರು ಹಾಗೂ ಇತರೆ ಕಾರ್ಮಿಕರ ಖಾತೆಗಳಿಗೆ ಕೋವಿಡ್ ಪರಿಹಾರವಾಗಿ ತಲಾ ₹10 ಸಾವಿರ ಜಮಾ ಆಗಬೇಕು. ಮಂಡಳಿಯಲ್ಲಿ ನಡೆದಿರುವ ಭಾರಿ ಅಕ್ರಮದ ಬಗ್ಗೆ ತನಿಖೆ ನಡೆಯಬೇಕು ಹಾಗೂ ಮಂಡಳಿಯ ಹಣ ದುರುಪಯೋಗ ಆಗದಂತೆ ತಡೆಯಬೇಕು’ ಎಂದು ಆಗ್ರಹಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.