ADVERTISEMENT

ಬೆಂಗಳೂರಿನ ಬೆಳ್ಳಂದೂರಿನಲ್ಲಿ ಪ್ರೆಸ್ಟೀಜ್‌ನಿಂದ ಖಾಸಗಿ ಮೇಲ್ಸೇತುವೆ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 7 ಜುಲೈ 2025, 0:16 IST
Last Updated 7 ಜುಲೈ 2025, 0:16 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

– ಎ.ಐ ಚಿತ್ರ

ಬೆಂಗಳೂರು: ಬೆಳ್ಳಂದೂರಿನಲ್ಲಿ ಹೊರವರ್ತುಲ ರಸ್ತೆಯಿಂದ ಟೆಕ್‌ ಪಾರ್ಕ್‌ವರೆಗೆ 1.5 ಕಿ.ಮೀ. ಉದ್ದದ ಖಾಸಗಿ ಮೇಲ್ಸೇತುವೆ ನಿರ್ಮಾಣ ಮಾಡಲು ಪ್ರೆಸ್ಟೀಜ್‌ ಗ್ರೂಪ್‌ ಮುಂದಾಗಿದೆ. ಅದಕ್ಕೆ ಸಂಬಂಧಿಸಿದಂತೆ ಬಿಬಿಎಂಪಿಯಿಂದ ಅನುಮತಿ ಪಡೆದಿದೆ.

ADVERTISEMENT

ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಮತ್ತು ಮಳೆ ನೀರು ಚರಂಡಿಯ ಮೇಲ್ಭಾಗದಲ್ಲಿ ಮೇಲ್ಸೇತುವೆ ನಿರ್ಮಾಣಗೊಳ್ಳಲಿದೆ. ಇದಕ್ಕೆ ಪ್ರತಿಯಾಗಿ ಕರಿಯಮ್ಮನ ಅಗ್ರಹಾರ ರಸ್ತೆ ವಿಸ್ತರಣೆಯ ವೆಚ್ಚವನ್ನು ಪ್ರೆಸ್ಟೀಜ್‌ ಗ್ರೂಪ್‌ ಭರಿಸಲಿದೆ.

ತನ್ನ ಕ್ಯಾಂಪಸ್‌ ಪ್ರವೇಶವನ್ನು ಸುಲಭಗೊಳಿಸಲು ಸಾರ್ವಜನಿಕ ಜಮೀನಿನಲ್ಲಿ ಯೋಜನೆ ರೂಪಿಸಿದ ಕೆಲವೇ ಖಾಸಗಿ ಕಂಪನಿಗಳ ಗುಂಪಿಗೆ ಪ್ರೆಸ್ಟೀಜ್ ಸೇರಲಿದೆ. ಹಿಂದೆ, ಮಾನ್ಯತಾ ಎಂಬೆಸಿ ಬ್ಯುಸಿನೆಸ್ ಪಾರ್ಕ್, ಹೊರ ವರ್ತುಲ ರಸ್ತೆಯಲ್ಲಿರುವ ಎತ್ತರದ ರಸ್ತೆಗೆ ನೇರ ಪ್ರವೇಶವನ್ನು ಒದಗಿಸಲು ಮೇಲ್ಸೇತುವೆ ನಿರ್ಮಿಸಿತ್ತು. ಲುಲು ಮಾಲ್, ಸಾರ್ವಜನಿಕ ರಸ್ತೆಯ ಒಂದು ಭಾಗದಲ್ಲಿ ಕೆಳ ಸೇತುವೆಯನ್ನು ನಿರ್ಮಿಸಿತ್ತು. ಅದೇ ರೀತಿ, ಬಾಗ್ಮನೆ ಗ್ರೂಪ್ ದೊಡ್ಡನೆಕ್ಕುಂದಿಯಲ್ಲಿರುವ ತನ್ನ ಕ್ಯಾಂಪಸ್‌ಗೆ 600 ಮೀಟರ್‌ ಉದ್ದದ ಮೇಲ್ಸೇತುವೆ ನಿರ್ಮಿಸಲು ಪ್ರಸ್ತಾವ ಸಲ್ಲಿಸಿದೆ.

ಪ್ರೆಸ್ಟೀಜ್ ಗ್ರೂಪ್ ಈ ಹಿಂದೆ 2022ರ ಆಗಸ್ಟ್‌ನಲ್ಲಿ ಮತ್ತು 2023ರ ನವೆಂಬರ್‌ನಲ್ಲಿ ಬಿಬಿಎಂಪಿ ಮುಂದೆ ಪ್ರಸ್ತಾವ ಇಟ್ಟಿತ್ತು. ಆದರೆ, ಅನುಮತಿ ಸಿಕ್ಕಿರಲಿಲ್ಲ. 

ಹಳೇ ಏರ್‌ಪೋರ್ಟ್ ರಸ್ತೆ ಮತ್ತು ಕರಿಯಮ್ಮನ ಅಗ್ರಹಾರ ರಸ್ತೆಗಳು, ಪ್ರಸ್ತಾವಿತ ಪ್ರೆಸ್ಟೀಜ್ ಬೀಟಾ ಟೆಕ್ ಪಾರ್ಕ್‌ ಅನ್ನು ಸಂಪರ್ಕಿಸುತ್ತವೆ. ಈ ಎರಡೂ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಿದೆ. ಜೊತೆಗೆ ಈ ಕ್ಯಾಂಪಸ್‌ನಲ್ಲಿ 5000ಕ್ಕೂ ಅಧಿಕ ಉದ್ಯೋಗಿಗಳು ಇರುವುದರಿಂದ ಈ ದಟ್ಟಣೆ ಇನ್ನಷ್ಟು ಹೆಚ್ಚಾಗಿದೆ. ಹಾಗಾಗಿ ಮೇಲ್ಸೇತುವೆ ನಿರ್ಮಿಸಲು ಅವಕಾಶ ನೀಡಬೇಕು. ಕರಿಯಮ್ಮನ ಅಗ್ರಹಾರ ರಸ್ತೆಯನ್ನು ಅಭಿವೃದ್ಧಿಪಡಿಸಿಕೊಡಲಾಗುವುದು ಎಂದು ಈ ಬಾರಿ ಪ್ರೆಸ್ಟೀಜ್ ಗ್ರೂಪ್‌ ಪ್ರಸ್ತಾವದಲ್ಲಿ ತಿಳಿಸಿತ್ತು. 

ಈ ವರ್ಷದ ಏಪ್ರಿಲ್‌ನಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಂದ ಒಪ್ಪಿಗೆ ಪಡೆಯಲಾಗಿತ್ತು. ನಂತರ ಬಿಬಿಎಂಪಿ ಒಪ್ಪಿಗೆ ನೀಡಿದೆ ಎಂದು ತಿಳಿದುಬಂದಿದೆ.

ಸಾಮಾನ್ಯವಾಗಿ ದೊಡ್ಡ ಟೆಕ್ ಪಾರ್ಕ್‌ಗಳಿಗೆ ಅನುಮೋದನೆ ನೀಡುವ ಮೊದಲು ಸರಾಗವಾಗಿ ಪ್ರವೇಶವನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. ಆದರೆ, ಬೆಳ್ಳಂದೂರಿನಲ್ಲಿ 70 ಎಕರೆ ಜಾಗದಲ್ಲಿ ನಿರ್ಮಾಣವಾಗುತ್ತಿರುವ ಟೆಕ್ ಪಾರ್ಕ್‌ಗಾಗಿ ಕಟ್ಟಡ ನಕ್ಷೆಯನ್ನು ಬಿಬಿಎಂಪಿ ಒಂದು ವರ್ಷದ ಹಿಂದೆಯೇ ಮಂಜೂರು ಮಾಡಿತ್ತು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸೆಪ್ಟೆಂಬರ್ 2023 ರಲ್ಲಿ ಅಭಿವೃದ್ಧಿ ಯೋಜನೆಯನ್ನು ಅನುಮೋದಿಸಿತ್ತು. ಈಗ ಮೇಲ್ಸೇತುವೆ ನಿರ್ಮಿಸಲು ಅನುಮೋದನೆ ನೀಡಲಾಗಿದೆ. 

ಬಿಬಿಎಂಪಿಯಿಂದ ಅನುಮೋದನೆ ನೀಡಿರುವುದನ್ನು ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್‌ನ ತಾಂತ್ರಿಕ ನಿರ್ದೇಶಕ ಬಿ.ಎಸ್. ಪ್ರಹ್ಲಾದ್‌ ದೃಢಪಡಿಸಿದ್ದಾರೆ. 40 ಅಡಿ ಅಗಲದ ರಸ್ತೆಯ ನಿರ್ಮಾಣಕ್ಕೂ ಹಣ ನೀಡುವಂತೆ ಬಿಬಿಎಂಪಿಯು ಡೆವಲಪರ್‌ಗೆ ಷರತ್ತು ವಿಧಿಸಿದೆ ಎಂದೂ ತಿಳಿಸಿದ್ದಾರೆ.

ಹೊಸ ರಸ್ತೆಯು ಸಕ್ರಾ ಆಸ್ಪತ್ರೆ ರಸ್ತೆಗೆ ಪ್ರಯಾಣದ ದೂರವನ್ನು 2.5 ಕಿ.ಮೀ. ಕಡಿಮೆ ಮಾಡಲಿದೆ. ನಗರ ಮೂಲಸೌಕರ್ಯವನ್ನು ಹೆಚ್ಚಿಸಲು ನಾಗರಿಕ ಸಂಸ್ಥೆಯು ಅಂತಹ ಸಾರ್ವಜನಿಕ-ಖಾಸಗಿ ಸಹಭಾಗಿತ್ವವನ್ನು ಪ್ರೋತ್ಸಾಹಿಸುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.