ಬೆಂಗಳೂರು: ‘ಮುಖ್ಯಮಂತ್ರಿ ಕುರ್ಚಿಗೆ ಕರ್ಚೀಫ್ ಹಾಕಿದರೆ ಜನ ಮತ ಹಾಕಲ್ಲ. ಕೆಲಸ ಮಾಡಿದರೆ ಮಾತ್ರ ಮತ ಹಾಕುತ್ತಾರೆ. ಈಗಲೇ ಮುಖ್ಯಮಂತ್ರಿ ವಿಚಾರವಾಗಿ ಯಾರೂ ಮಾತನಾಡುವುದು ಸರಿಯಲ್ಲ’ ಎಂದು ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಹೇಳಿದರು.
ಮುಖ್ಯಮಂತ್ರಿ ಸ್ಥಾನದ ಬಗ್ಗೆ ಜಮೀರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್, ‘ತಮ್ಮ ಅಭಿಪ್ರಾಯವನ್ನು ಎಲ್ಲಿ ವ್ಯಕ್ತಪಡಿಸಬೇಕೊ ಅಲ್ಲಿ ಹೇಳಬೇಕು. ಸಾರ್ವಜನಿಕವಾಗಿ ವ್ಯಕ್ತಪಡಿಸುವುದರಿಂದ ಪಕ್ಷಕ್ಕೆ ಮುಜುಗರವಾಗಲಿದೆ’ ಎಂದು ಹೇಳಿದರು.
‘ನಮ್ಮ ನಮ್ಮ ಸಮುದಾಯಗಳ ಮುಂದೆ ಬೆಂಬಲಿಸಿ ಎಂದು ಮನವಿ ಮಾಡುವುದು ಸಹಜ. ಸಮುದಾಯದ ಬೆಂಬಲ ಕೇಳುವುದರಲ್ಲಿ ತಪ್ಪಿಲ್ಲ’ ಎಂದರು.
ಕೆ.ಎನ್. ರಾಜಣ್ಣ ಮಾತನಾಡಿ, ‘ಮುಖ್ಯಮಂತ್ರಿ ಯಾರು ಎನ್ನುವುದನ್ನು ಹೈಕಮಾಂಡ್ ತೀರ್ಮಾನಿಸಲಿದೆ. ಬೇರೆ ಯಾರೇ ಹೇಳಿಕೆ ಕೊಟ್ಟರೂ ಪ್ರತಿಕ್ರಿಯೆ ನೀಡುವ ಅವಶ್ಯಕತೆ ಇಲ್ಲ. ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಗಳು ಇಬ್ಬರೇ ಅಲ್ಲ. ಖರ್ಗೆ, ಪರಮೇಶ್ವರ, ಎಂ.ಬಿ. ಪಾಟೀಲ ಹೆಸರು ಕೂಡ ಕೇಳಿಬರುತ್ತಿಲ್ಲವೇ? ಜನ ಕೂಗುವುದಕ್ಕೆ ನಾವು ಏನು ಮಾಡಲು ಆಗುತ್ತದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.