ಬೆಂಗಳೂರು: ನಗರದ ರಂಗಶಂಕರದಲ್ಲಿ ಬುಧವಾರ ಗಾಯಕಿ ಎಂ.ಡಿ.ಪಲ್ಲವಿ ಸೇರಿದಂತೆ ಹಲವರ ನೇತೃತ್ವದಲ್ಲಿ ಪ್ಯಾಲಿಸ್ಟೀನ್ ಪರ ಆಯೋಜಿಸಿದ್ದ ಕಿರು ನಾಟಕ, ಕವನ ವಾಚನ ಕಾರ್ಯಕ್ರಮಕ್ಕೆ ಪೊಲೀಸರು ಅನುಮತಿ ನಿರಾಕರಿಸಿದ್ದರಿಂದ ಕಾರ್ಯಕ್ರಮವನ್ನು ಆಯೋಜಕರು ದಿಢೀರ್ ರದ್ದು ಮಾಡಿದರು.
ಪೊಲೀಸರ ನಡೆಗೆ ಆಯೋಜಕರೂ ಸೇರಿದಂತೆ ಹಲವರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ನಗರದಲ್ಲಿ ಪ್ಯಾಲಿಸ್ಟೀನ್ ಪರವಾಗಿ ಪ್ರತಿಭಟನೆ, ಸಭೆ ನಡೆಸಲು ಪೊಲೀಸರು ಅನುಮತಿ ನೀಡುತ್ತಿಲ್ಲ.
ಮಹಾತ್ಮ ಗಾಂಧಿ ರಸ್ತೆಯಲ್ಲಿ ನಡೆದಿದ್ದ ಪ್ರತಿಭಟನಕಾರರ ಮೇಲೆಯೂ ಪ್ರಕರಣ ದಾಖಲು ಮಾಡಲಾಗಿದೆ. ‘ನಾವು ಎಲ್ಲಿದ್ದೀವಿ’ ಎಂದು ಹಲವು ಹೋರಾಟಗಾರರು ಸಾಮಾಜಿಕ ಮಾಧ್ಯಮದಲ್ಲಿ ಪ್ರಶ್ನಿಸಿ, ಆಕ್ರೋಶ ಹೊರಹಾಕಿದ್ದಾರೆ.
‘ಇದು ನಾಚಿಕೆಗೇಡಿನ ಸಂಗತಿ. ಕಲಾವಿದರು, ತಮ್ಮ ಅಭಿಮತ ಹೇಳುವುದಕ್ಕೂ ಆಸ್ಪದವಿಲ್ಲವೇ? ಸರ್ಕಾರ ಅನುಮತಿ ಕೊಡಬೇಕು’ ಎಂದು ಸಾಹಿತಿ ರಹಮತ್ ತರೀಕೆರೆ ಆಗ್ರಹಿಸಿದ್ದಾರೆ.
‘ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆಗೆ ನ್ಯಾಯಾಲಯ ಅನುಮತಿ ನೀಡಿದೆ. ಆದರೆ, ಅಲ್ಲಿಯೂ ಪ್ರತಿಭಟನೆ ಮಾಡದಂತೆ ತಡೆದಿದ್ದು ಏಕೆ? ಅಂದು ಎಡಪಕ್ಷಗಳು ಪ್ಯಾಲಿಸ್ಟೀನ್ ಕುರಿತು ‘ಯುದ್ಧ ಬೇಡ ಶಾಂತಿ ಬೇಕು’ ಎಂಬ ಘೋಷಣೆಯೊಂದಿಗೆ ಸಭೆ ನಡೆಸಲು ಕೇಳಲಾಗಿತ್ತು. ಆಗಲೂ ನಿರಾಕರಣೆ ಮಾಡಲಾಗಿತ್ತು. ನೂರಾರು ಕಾರ್ಯಕರ್ತರು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಮಾಡಿದಾಗ ಎಲ್ಲರನ್ನೂ ಬಂಧಿಸಲಾಗಿತ್ತು. ಅಭಿವ್ಯಕ್ತಿ ಸ್ವಾತಂತ್ರ್ಯದ ದಮನ ಅಂದರೆ ಇದೇನಾ’ ಎಂದು ರಂಗಕರ್ಮಿ ಶಶಿಕಾಂತ ಯಡಹಳ್ಳಿ ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.