ADVERTISEMENT

‘ಫಲಿತಾಂಶ ಅಳೆಯುವ ಪ್ರಕ್ರಿಯೆ ಅವೈಜ್ಞಾನಿಕ’

​ಪ್ರಜಾವಾಣಿ ವಾರ್ತೆ
Published 14 ಜುಲೈ 2020, 20:40 IST
Last Updated 14 ಜುಲೈ 2020, 20:40 IST
ಅಶ್ವಿನ್‌ ಮಹೇಶ್‌ 
ಅಶ್ವಿನ್‌ ಮಹೇಶ್‌    

ಬೆಂಗಳೂರು: ‘ರಾಜ್ಯದಲ್ಲಿ ಪರೀಕ್ಷೆ ಮತ್ತು ಶಿಕ್ಷಣ ಎಂಬ ಅಂಶಗಳನ್ನು ಪ್ರತ್ಯೇಕವಾಗಿ ನೋಡಲಾಗುತ್ತಿದೆ. ಶಿಕ್ಷಣ ಇಲಾಖೆಯೆಂಬುದು ಶಾಲೆ ಮತ್ತು ಕಾಲೇಜಿಗೆ ಸೀಮಿತವಾಗಿರುವಂತೆ ಕೆಲಸ ಮಾಡುತ್ತಿದೆಯೇ ವಿನಾ, ನಿಜವಾದ ಶಿಕ್ಷಣ ನೀಡುವ ಕೆಲಸ ಮಾಡುತ್ತಿಲ್ಲ’ ಎಂದು ಯೋಜನಾ ತಜ್ಞ ಅಶ್ವಿನ್‌ ಮಹೇಶ್‌ ಅಭಿಪ್ರಾಯಪಟ್ಟಿದ್ದಾರೆ.

ಪಿಯು ಫಲಿತಾಂಶಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅವರು, ‘ರಾಜ್ಯದಲ್ಲಿ ಪಿಯು ಫಲಿತಾಂಶ ಶೇ 69.2ರಷ್ಟು ಬಂದಿದೆ ಎಂದು ಸಚಿವರು ಹೇಳಿದ್ದಾರೆ. ಆದರೆ, ಇದು ಅವೈಜ್ಞಾನಿಕ. ರಾಜ್ಯದಲ್ಲಿ ಪಿಯು ಶಿಕ್ಷಣ ಪಡೆಯಬೇಕಾಗಿದ್ದ ವಯಸ್ಸಿನ ಮಕ್ಕಳನ್ನು ಗಣನೆಗೆ ತೆಗೆದುಕೊಂಡರೆ, ಶೇ 35ರಿಂದ ಶೇ 40ರಷ್ಟು ಮಾತ್ರ ಫಲಿತಾಂಶ ಬಂದಿದೆ ಎಂದು ಪರಿಗಣಿಸಬೇಕಾಗುತ್ತದೆ’ ಎಂದು ಹೇಳಿದರು.

‘ರಾಜ್ಯದಲ್ಲಿ ಪಿಯು ಪರೀಕ್ಷೆ ಬರೆಯಬಹುದಾದ, ಅಂದರೆ 17ರಿಂದ 18 ವರ್ಷದ 10 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಈ ಪೈಕಿ, ಪರೀಕ್ಷೆ ತೆಗೆದುಕೊಂಡವರು 6.85 ಲಕ್ಷ ವಿದ್ಯಾರ್ಥಿಗಳು ಮಾತ್ರ. 4 ಲಕ್ಷದಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅದೇ 10 ಲಕ್ಷ ವಿದ್ಯಾರ್ಥಿಗಳು ಶಿಕ್ಷಣ ಪಡೆದು, ಪರೀಕ್ಷೆ ಬರೆದಿದ್ದರೆ ಫಲಿತಾಂಶ ಶೇ 35ರಿಂದ ಶೇ 40ರಷ್ಟೇ ಬರುತ್ತಿತ್ತು’ ಎಂದು ಅವರು ಹೇಳಿದರು.

ADVERTISEMENT

‘ಸುಮಾರು ನಾಲ್ಕು ಲಕ್ಷ ಮಕ್ಕಳಿಗೆ ಸರ್ಕಾರ ಪದವಿಪೂರ್ವ ಶಿಕ್ಷಣ ನೀಡಿಲ್ಲ. ಪರೀಕ್ಷೆ ತೆಗೆದುಕೊಂಡು ಉತ್ತೀರ್ಣರಾದ ಮಕ್ಕಳ ಪ್ರಮಾಣದ ಆಧಾರದ ಮೇಲೆ ಶಿಕ್ಷಣದ ಮಟ್ಟ ಅಳೆಯುವುದು ಸರಿಯಲ್ಲ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.