
ಬೆಂಗಳೂರು: ನೆಲಮಂಗಲ ತಾಲ್ಲೂಕು ದಾಬಸ್ಪೇಟೆ ಸಮೀಪದಲ್ಲಿರುವ ಶೃಂಗೇರಿ ಶಿವಗಂಗಾ ಮಠದ 19ನೇ ಪೀಠಾಧಿಪತಿ ಪುರುಷೋತ್ತಮ ಭಾರತೀ ಸ್ವಾಮೀಜಿ (73) ಶುಕ್ರವಾರ ನಿಧನರಾದರು. ಮಠದ ಆವರಣದಲ್ಲಿಯೇ ಪ್ರಮುಖರ ಸಮ್ಮುಖದಲ್ಲಿ ಸಂಜೆ ಅಂತ್ಯಕ್ರಿಯೆ ನಡೆಯಿತು.
‘ದೀಪಾವಳಿ ಹಬ್ಬದ ದಿನ ತೀವ್ರ ಅಸ್ವಸ್ಥರಾಗಿದ್ದ ಸ್ವಾಮೀಜಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸಲಿಲ್ಲ’ ಎಂದು ವಕೀಲ ಅಶೋಕ್ ಹಾರನಹಳ್ಳಿ ತಿಳಿಸಿದ್ದಾರೆ.
ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯ ವೆಲ್ಲಟೂರು ಇವರ ಹುಟ್ಟೂರು. ಸೇತುಮಾಧವ ಅವಧಾನಿ ಮತ್ತು ಕಲ್ಯಾಣಿ ಬಾಲಾ ತ್ರಿಪುರಸುಂದರಮ್ಮ ಅವರ ಪುತ್ರರಾದ ಇವರ ಪೂರ್ವಾಶ್ರಮದ ಹೆಸರು ಕಮ್ಮಂಬಾಟಿ ನಾಗೇಶ್ವರ ಅವಧಾನಿ.
ವಿಜಯವಾಡದಲ್ಲಿ ವಿದ್ಯಾಭ್ಯಾಸ ಪೂರೈಸಿದ ಬಳಿಕ ಅಲ್ಲಿಯೇ ಶೃಂಗೇರಿ ಮಠದಲ್ಲಿ ಪಂಚ ಕಾವ್ಯ, ಜ್ಯೋತಿಷ ಶಾಸ್ತ್ರವನ್ನು ಅಧ್ಯಯನ ಮಾಡಿದರು. ಮೈಸೂರಿನ ಅವಧೂತ ದತ್ತಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. 2014ರ ಮಾ.3ರಂದು ಅವರನ್ನು ಶಿವಗಂಗಾ ಮಠದ ಪೀಠಾಧಿಪತಿಯಾಗಿ ನೇಮಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.