ಬೆಂಗಳೂರು: ಪೊಲೀಸರ ಕಾರ್ಯವೈಖರಿ ಬಗ್ಗೆ ಜನರ ಅಭಿಪ್ರಾಯ ಸಂಗ್ರಹಿಸಲು ಆಗ್ನೇಯ ವಿಭಾಗದ ಪೊಲೀಸರು ಕ್ಯೂಆರ್ ಕೋಡ್ ವ್ಯವಸ್ಥೆ ಜಾರಿಗೆ ತಂದಿದ್ದು, ಇದಕ್ಕೆ ಉತ್ತಮ ಸ್ಪಂದನ ವ್ಯಕ್ತವಾಗುತ್ತಿದೆ.
ವ್ಯವಸ್ಥೆ ಜಾರಿಗೆ ಬಂದ ಎರಡು ದಿನಗಳಲ್ಲಿ 14 ಪೊಲೀಸ್ ಠಾಣೆಗಳಿಗೆ ಸಂಬಂಧಪಟ್ಟಂತೆ 1,200 ಮಂದಿ ಅಭಿಪ್ರಾಯ ದಾಖಲಿಸಿದ್ದಾರೆ.
‘ಜನರ ಅಭಿಪ್ರಾಯಗಳನ್ನು ದಾಖಲಿಸಿಕೊಂಡು ಪರಿಶೀಲಿಸಲು ಪ್ರತ್ಯೇಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದುವರೆಗೂ 1,200 ಮಂದಿ ಅಭಿಪ್ರಾಯ ತಿಳಿಸಿದ್ದಾರೆ. ಈ ಪೈಕಿ 800 ಮಂದಿ, ಪೊಲೀಸರ ಕೆಲಸವನ್ನು ಶ್ಲಾಘಿಸಿದ್ದಾರೆ. 401 ಮಂದಿ ಪೊಲೀಸರ ಕೆಲಸ ಹಾಗೂ ನಡವಳಿಕೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
‘ಪೊಲೀಸರು ದೂರು ಸ್ವೀಕರಿಸುವುದಿಲ್ಲ. ಸುಖಾಸುಮ್ಮನೇ ಸಮಯ ವ್ಯರ್ಥ ಮಾಡುತ್ತಾರೆ. ಠಾಣೆಗೆ ಅಲೆದಾಡಿಸುತ್ತಾರೆ. ಹಲವರು, ಏಕವಚನದಲ್ಲಿ ಮಾತನಾಡುತ್ತಾರೆ. ಕೆಲವರಂತೂ ಖಾಕಿಯನ್ನು ಹಣ ವಸೂಲಿಗೆ ಬಳಸಿಕೊಳ್ಳುತ್ತಿದ್ದಾರೆ. ದೂರು ದಾಖಲಿಸಿದ ನಂತರ ತನಿಖೆ ಪ್ರಗತಿ ವಿಚಾರಿಸಿದರೆ, ಮಾಹಿತಿ ನೀಡುವುದಿಲ್ಲ’ ಎಂಬುದಾಗಿ ಹಲವರು ದೂರಿದ್ದಾರೆ’ ಎಂದು ಅಧಿಕಾರಿ ತಿಳಿಸಿದರು.
‘ಉತ್ತಮ ಅಭಿಪ್ರಾಯ ಬಾರದ ಠಾಣೆಗಳ ಸಿಬ್ಬಂದಿ ಮೇಲೆ ನಿಗಾ ವಹಿಸಲು ವಿಶೇಷ ತಂಡಕ್ಕೆ ತಿಳಿಸಲಾಗಿದೆ. ಅವರ ನಡವಳಿಕೆ ಯಥಾಪ್ರಕಾರ ಮುಂದುವರೆದರೆ ಶಿಸ್ತು ಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.