ADVERTISEMENT

ರಾಧಾಕೃಷ್ಣ ಮೊಬೈಲ್‌ ಕ್ಯಾಂಟೀನ್‌ಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2023, 20:48 IST
Last Updated 3 ಜನವರಿ 2023, 20:48 IST
ಬಸವನಗುಡಿಯಲ್ಲಿ ರಾಧಾಕೃಷ್ಣ ಫುಡ್‌ ಮೊಬೈಲ್‌ ಕ್ಯಾಂಟೀನ್‌ಗಳಿಗೆ ಸೋಮವಾರ ಚಾಲನೆ ನೀಡಲಾಯಿತು
ಬಸವನಗುಡಿಯಲ್ಲಿ ರಾಧಾಕೃಷ್ಣ ಫುಡ್‌ ಮೊಬೈಲ್‌ ಕ್ಯಾಂಟೀನ್‌ಗಳಿಗೆ ಸೋಮವಾರ ಚಾಲನೆ ನೀಡಲಾಯಿತು   

ಬೆಂಗಳೂರು: ಬಡವರ ಹಸಿವು ನೀಗಿಸುವ ಜತೆಗೆ ಸ್ವಾದಿಷ್ಟ ಮತ್ತು ಉತ್ತಮ ಗುಣಮಟ್ಟದ ಆಹಾರ ನೀಡುವ ಉದ್ದೇಶದಿಂದ ಬಸವನಗುಡಿಯಲ್ಲಿ ‘ರಾಧಾಕೃಷ್ಣ ಫುಡ್‌’ ಮೊಬೈಲ್‌ ಕ್ಯಾಂಟೀನ್‌ಗಳನ್ನು ಆರಂಭಿಸಲಾಗಿದೆ.

ಶಾಸಕ ರವಿಸುಬ್ರಮಣ್ಯ, ಮಾಜಿ ಉಪಮಹಾಪೌರ ಲಕ್ಷ್ಮೀನಾರಾಯಣ್ ಮತ್ತು ರಾಧಾಕೃಷ್ಣ ಫುಡ್ ಕ್ಯಾಂಟೀನ್ ಮಾಲೀಕರಾದ ಗಿರೀಶ್, ಲೋಕೇಶ್ ಅವರು ಮೊಬೈಲ್ ಕ್ಯಾಂಟೀನ್‌ಗಳಿಗೆ ಸೋಮವಾರ ಚಾಲನೆ ನೀಡಿದರು.

‘ಕೇವಲ ₹10ಗೆ ಊಟ ಮತ್ತು ತಿಂಡಿ ನೀಡಲಾಗುತ್ತಿದೆ. ಬಡವರ ಪಾಲಿಗೆ ಈ ಮೊಬೈಲ್ ಕ್ಯಾಂಟೀನ್‌ಗಳು ಆಸರೆಯಾಗಲಿವೆ’ ಎಂದು ಮಾಲೀಕರಾದ ಗಿರೀಶ್‌ ಮತ್ತು ಲೋಕೇಶ್‌ ತಿಳಿಸಿದ್ದಾರೆ.

ADVERTISEMENT

‘ನಗರ ಪ್ರದೇಶದಲ್ಲಿ ಯಾವುದೇ ಹೋಟೆಲ್‌ನಲ್ಲಿ ತಿಂಡಿ ಸೇವಿಸಲು ₹70ರಿಂದ ₹100 ಬೇಕು. ಆದರೆ, ರಾಧಾಕೃಷ್ಣ ಫುಡ್ ಮೊಬೈಲ್ ಕ್ಯಾಂಟೀನ್‌ನಲ್ಲಿ ₹10ರೂಪಾಯಿಗೆ ಹೊಟ್ಟೆ ತುಂಬುವಷ್ಟು ತಿಂಡಿ ನೀಡಲಾಗುತ್ತಿದೆ’ ಎಂದು ಅವರು ತಿಳಿಸಿದ್ದಾರೆ.

‘ಮೂರು ಮೊಬೈಲ್ ಕ್ಯಾಂಟೀನ್‌ಗಳು ಬಡವರು ಹೆಚ್ಚಿನ ಸಂಖ್ಯೆಯಲ್ಲಿರುವ ಸ್ಥಳಗಳಲ್ಲಿ ನಿಲ್ಲುತ್ತವೆ. ಮುಂಬರುವ ದಿನಗಳಲ್ಲಿ 15ಕ್ಕೂ ಹೆಚ್ಚು ಮೊಬೈಲ್ ಫುಡ್‌ ಕ್ಯಾಂಟೀನ್‌ಗಳನ್ನು ತೆರೆಯುವ ಉದ್ದೇಶ ಇದೆ’ ಎಂದು ತಿಳಿಸಿದ್ದಾರೆ.

‘ಇಡ್ಲಿ, ಚಿತ್ರಾನ್ನ, ಪುಲಾವ್, ಮೊಸರನ್ನ, ತರಕಾರಿ ಬಾತ್, ಉಪ್ಪಿಟ್ಟು, ಕೇಸರಿಬಾತ್‌ ನಮ್ಮಲ್ಲಿ ವಿಶೇಷ. ಬಡವರ ಹೊಟ್ಟೆ ಹಸಿವು ನೀಗಿಸಬೇಕು ಎಂಬ ಉದ್ದೇಶದಿಂದ ಆರಂಭಿಸಲಾಗಿದೆ. ನಗರ ಪ್ರದೇಶದಲ್ಲಿ ಬೇಡಿಕೆ ಹೆಚ್ಚಿದಂತೆ ಮತ್ತು ಬಡವರು ವಾಸಿಸುವ ಪ್ರದೇಶಗಳಲ್ಲಿ ಮೊಬೈಲ್ ಕ್ಯಾಂಟೀನ್ ಪ್ರಾರಂಭಿಸಲಾಗುವುದು. ರಾಧಾಕೃಷ್ಣ ಫುಡ್ ಕ್ಯಾಂಟೀನ್ ವತಿಯಿಂದ 5ಕ್ಕೂ ಹೆಚ್ಚು ಅನಾಥ ಮಕ್ಕಳ ಶಾಲೆಯ ನೂರಾರು ವಿದ್ಯಾರ್ಥಿಗಳಿಗೆ ಹಾಗೂ ವೃದ್ಧಾಶ್ರಮಕ್ಕೆ ಉಚಿತವಾಗಿ ಪ್ರತಿದಿನ ತಿಂಡಿ
ವಿತರಿಸಲಾಗುತ್ತಿದೆ’ ಎಂದು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.