ಬೆಂಗಳೂರು: ನಗರದ ಕೆಲ ಭಾಗಗಳಲ್ಲಿ ಗುರುವಾರ ಚದುರಿದಂತೆ, ಇನ್ನೂ ಕೆಲವು ಕಡೆ ಭಾರಿ ವರ್ಷಧಾರೆ ಆಗಿದೆ.
ಇನ್ನೂ ಎರಡು ದಿನ ಮೋಡ ಕವಿದ ವಾತಾವರಣ ಇರಲಿದ್ದು ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕೋರಮಂಗಲದ ಆರನೇ ಹಂತದಲ್ಲಿ ಸ್ವಪ್ನಾ ಬುಕ್ ಹೌಸ್ ಎದುರುಗಡೆ ಬೃಹದಾಕಾರ ಮರ ರಾತ್ರಿ 9.30ರ ಸುಮಾರಿಗೆ ನೆಲಕ್ಕುರುಳಿದ ಪರಿಣಾಮ ಬಿಎಂಡಬ್ಯೂ ಕಾರು ಜಖಂಗೊಂಡಿದೆ. ಆದರೆ, ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ. ರಸ್ತೆಗೆ ಅಡ್ಡವಗಿ ಮರ ಬಿದ್ದುದರಿಂದ ಅರ್ಧ ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು.
ಈ ವೇಳೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು, ಬೆಸ್ಕಾಂ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಬಂದು ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು. ಬಿಬಿಎಂಪಿ ಸಿಬ್ಬಂದಿ ಮರ ತೆರವುಗೊಳಿಸಿದರು.
ಎಲ್ಲಿ, ಎಷ್ಟು ಮಳೆ?: ಕೋನಪ್ಪನ ಅಗ್ರಹಾರದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ 28 ಮಿ.ಮೀ. ಮಳೆಯಾಗಿದೆ. ಉಳಿದಂತೆ, ಬೇಗೂರು, ತಾವರೆಕೆರೆ 23, ಕೋಣನಕುಂಟೆ 20, ಗೊಟ್ಟಿಗೆರೆ 17, ಅರಕೆರೆ, ದೊರೆಸಾನಿಪಾಳ್ಯ 16, ಸಿದ್ದನಹೊಸಹಳ್ಳಿ 13, ದಾಸನಪುರ 11, ಮಾದನಾಯಕನಹಳ್ಳಿ, ಗಾಳಿ ಆಂಜನೇಯ ದೇವಸ್ಥಾನ ಬಳಿ 10, ವಡೇರಹಳ್ಳಿ, ಚಿಕ್ಕಬಿದರಕಲ್ಲು 9 ಮಿ.ಮೀ. ಮಳೆ ಆಗಿದೆ.
ಆಲೂರು, ಗೋಪಾಲಪುರ, ಹೊಸ್ಕೂರು, ಕಿತ್ತನಹಳ್ಳಿ, ಕಡಬಗೆರೆ, ಚಿಕ್ಕಬಾಣಾವಾರ, ಕೆಂಗೇರಿ, ಚಾಮರಾಜಪೇಟೆ, ದೊಡ್ಡ ಬೊಮ್ಮಸಂದ್ರ, ವಿದ್ಯಾರಣ್ಯಪುರದಲ್ಲಿ ತುಂತುರು ಮಳೆ ಸುರಿದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.