ಬೆಂಗಳೂರು: ‘ನಗರದ ಕುಮಾರಪಾರ್ಕ್ ಪಶ್ಚಿಮ ಭಾಗದ ವಿ.ಎಸ್.ರಾಜು ರಸ್ತೆಯಲ್ಲಿರುವ ಖಾಸಗಿ ಜಾಗದಲ್ಲಿ ಮಳೆ ನೀರು ಭಾರಿ ಪ್ರಮಾಣದಲ್ಲಿ ಸಂಗ್ರಹವಾಗಿದ್ದು, ಕೂಡಲೇ ನೀರನ್ನು ತೆರವು ಮಾಡಬೇಕು’ ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.
ವಾರ್ಡ್ ಸಂಖ್ಯೆ–93ರ ವ್ಯಾಪ್ತಿಯಲ್ಲಿರುವ ಈ ಖಾಸಗಿ ಜಾಗದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಗೊಂಡು, ಒಂದು ವರ್ಷದಿಂದ ಸ್ತಬ್ಧವಾಗಿದೆ.
‘ಅಡಿಪಾಯ ಆಳವಾಗಿರುವ ಕಾರಣ ಆರು ಅಡಿಗಳಿಗೂ ಹೆಚ್ಚಿನ ಪ್ರಮಾಣದಲ್ಲಿ ಮಳೆ ನೀರು ಸಂಗ್ರಹಗೊಂಡು ಪಾಚಿ ಕಟ್ಟಿಕೊಂಡಿದೆ.ಈ ಜಾಗದ ಸುತ್ತಲೂ ಹಲವು ನಿವಾಸಗಳಿದ್ದು, ನೀರಿನಿಂದ ಕಾಯಿಲೆಗಳು ಬರುವ ಆತಂಕದಲ್ಲಿದ್ದೇವೆ. ನೀರನ್ನು ತೆರವುಗೊಳಿಸಿದರೆ ಅನುಕೂಲ’ ಎನ್ನುವುದು ಇಲ್ಲಿನ ನಿವಾಸಿಗಳ ಮನವಿ.
‘ಕಾರಣಾಂತರಗಳಿಂದ ಕಟ್ಟಡ ಕಾಮಗಾರಿ ನಿಂತಿರಬಹುದು. ಆದರೆ, ಮಳೆ ಬಂದಾಗ ಭಾರಿ ಪ್ರಮಾಣದಲ್ಲಿ ನೀರು ಸಂಗ್ರಹಗೊಂಡು ಸ್ಥಳೀಯರಲ್ಲಿ ಆತಂಕ ಮೂಡಿದೆ. ನೀರು ಒಂದೆಡೆ ನಿಂತಿರುವುದರಿಂದ ದುರ್ನಾತ ಬರುತ್ತಿದೆ. ಕ್ರಮೇಣ ಸೊಳ್ಳೆಯ ಕಾಟವೂ ಅಧಿಕವಾಗಿದ್ದು, ಡೆಂಗಿ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಆಸ್ಪದ ನೀಡುವಂತಿದೆ’ ಎಂದು ಸ್ಥಳಿಯ ನಿವಾಸಿ ರಾಜೀವ್ ಕಳವಳ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.