ರಾಜರಾಜೇಶ್ವರಿ ನಗರ: ಕಲ್ಯಾಣನಗರ ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ರಾಜಕಾಲುವೆಗೆ ತಡೆಗೋಡೆ ಇಲ್ಲದ ಕಾರಣ ನಿತ್ಯ ವಾಹನ ಸವಾರರು ಸ್ವಲ್ಪ ಯಾಮಾರಿದರೂ ಬಾಯಿ ತೆರೆದುಕೊಂಡಿರುವ ರಾಜಕಾಲುವೆಯ ಪಾಲಾಗುತ್ತಿದ್ದಾರೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.
ರಸ್ತೆಯ ಬದಿಯಲ್ಲಿರುವ ರಾಜಕಾಲುವೆಗೆ ಈವರೆಗೂ ತಡೆಗೋಡೆ ನಿರ್ಮಿಸಿಲ್ಲ. ಈಸ್ಟ್ ವೆಸ್ಟ್ ಶಾಲೆ, ಟ್ರಿಬೈ ಪ್ರಾವಿಡೆಂಟ್ ಅಪಾರ್ಟ್ಮೆಂಟ್, ಲಿಂಗಧೀರನಹಳ್ಳಿ ಹಾಗೂ ಕಲ್ಯಾಣನಗರದ ನಿವಾಸಿಗಳು ಸೇರಿ ನೂರಾರು ನಾಗರಿಕರು, ಮಕ್ಕಳು ಹಾಗೂ ಹಿರಿಯರು ಈ ರಸ್ತೆಯಲ್ಲಿ ಸಂಚರಿಸುವುದೇ ದುಸ್ಸಾಹಸವಾಗಿದೆ. ರಾತ್ರಿ ವೇಳೆ ರಸ್ತೆ ಬದಿಯ ರಾಜಕಾಲುವೆ ಗೋಚರಿಸುವುದೇ ಇಲ್ಲ. ಇದರಿಂದ ವಾಹನ ಸವಾರರು ನೇರವಾಗಿ ಚರಂಡಿ ಪಾಲಾಗುತ್ತಿದ್ದಾರೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.
ಪಾಲಿಕೆ ಮಾಜಿ ಸದಸ್ಯ ಎ.ಎಂ.ಹನುಮಂತೇಗೌಡ ಮಾತನಾಡಿ, ‘ರಸ್ತೆ ಅಭಿವೃದ್ಧಿ ಮಾಡಿದರೆ ಸಾಲದು ರಸ್ತೆಗೆ ಹೊಂದಿಕೊಂಡಂತಿರುವ ರಾಜಕಾಲುವೆ, ಹಳ್ಳ ಹಾಗೂ ಕೆರೆ ಏರಿಗಳಿಗೆ ತಡೆಗೋಡೆ ನಿರ್ಮಾಣ ಮಾಡಬೇಕು. ಇಲ್ಲವಾದಲ್ಲಿ ಅನಾಹುತಗಳು ತಪ್ಪಿದ್ದಲ್ಲ’ ಎಂದು ಎಚ್ಚರಿಸಿದ್ದಾರೆ.
ಸಿಂಡಿಕೇಟ್ ಬ್ಯಾಂಕ್ ಕಾಲೊನಿ, ಹೇರೋಹಳ್ಳಿ ಭಾಗದಿಂದ ಪ್ರತಿನಿತ್ಯ ಶಾಲಾ ವಾಹನಗಳು, ಮಕ್ಕಳನ್ನು ಶಾಲೆಗೆ ಬಿಡಲು ನೂರಾರು ಪೋಷಕರು ಅದರಲ್ಲೂ ಶಾಲಾ ಮಕ್ಕಳು ಅಮಾಯಕವಾಗಿ ಇದರ ಪಕ್ಕದಿಂದಲೇ ನಡೆದು ಹೋಗುತ್ತಾರೆ. ಆದಷ್ಟು ಶೀಘ್ರ ರಾಜಕಾಲುವೆಗೆ ತಡೆಗೋಡೆ
ನಿರ್ಮಾಣ ಮಾಡಬೇಕೆಂದು ಡಿ ಗ್ರೂಪ್ ನಿವಾಸಿ ಆರ್.ಚಂದ್ರಶೇಖರ್ ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.