ಬೆಂಗಳೂರು: ‘ಕಾನೂನಾತ್ಮಕವಾಗಿ ದೇಶದಲ್ಲಿ ನೆಲೆಸಿರುವ ಅನ್ಯರಿಗೆ ಸೂಕ್ತ ರಕ್ಷಣೆ ನೀಡುವುದು ಈ ಹಿಂದಿನ ಸರ್ಕಾರಗಳ ಪ್ರಮುಖ ಆದ್ಯತೆಯಾಗಿತ್ತು. ಆದರೆ, ಬದಲಾದ ಸನ್ನಿವೇಶದಲ್ಲಿ ಹೊರದಬ್ಬುವ ಪ್ರಯತ್ನಗಳು ನಡೆಯುತ್ತಿವೆ’ ಎಂದು ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ಅಭಿಪ್ರಾಯ ಪಟ್ಟರು.
ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರವು ನಗರದಲ್ಲಿ ಬುಧವಾರ ಆಯೋಜಿಸಿದ್ದ ‘ವಿದೇಶಿ ನೀತಿಯ ಮೌಲ್ಯಗಳು’ ವಿಚಾರ ಸಂಕಿರಣದಲ್ಲಿ ಮಾತನಾಡಿದರು.‘ಅತಿಥಿ ದೇವೋಭವ ಎಂಬುದು ನಮ್ಮ ಸಂಸ್ಕೃತಿ. ಆದ್ದರಿಂದಲೇ ದೇಶದಲ್ಲಿ ನೆಲೆಸಿರುವ ವಿದೇಶಿಯರಿಗೆ ಅಗತ್ಯ ರಕ್ಷಣೆಯನ್ನು ನೀಡುತ್ತಾ ಬರಲಾಗಿದೆ. ಸ್ವಾತಂತ್ರ್ಯ ಬಳಿಕ ದೇಶದಲ್ಲಿ ನೆಲೆಸಿರುವ ಮುಸ್ಲಿಮರು ಸೇರಿದಂತೆ ವಿದೇಶಿಯರಿಗೆ ರಕ್ಷಣೆ ನೀಡಬೇಕು ಎಂಬ ನಿಲುವನ್ನು ನೆಹರೂ ಹೊಂದಿದ್ದರು’ ಎಂದು ತಿಳಿಸಿದರು.
‘ನಮ್ಮಲ್ಲಿ ಸಾಕಷ್ಟು ಬಂಡವಾಳವಿದೆ. ಆದರೆ, ಹೂಡಿಕೆಗೆ ಸಂಬಂಧಿಸಿದಂತೆ ನಾವು ಚೀನಿಯರೊಂದಿಗೆ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ. ತಂತ್ರಾಂಶ ಕ್ಷೇತ್ರದಲ್ಲಿ ನಾವು ಪ್ರಬಲರಾಗುತ್ತಿದ್ದು,ನಮ್ಮಲ್ಲಿನ ಮಾನವ ಸಂಪನ್ಮೂಲವನ್ನು ಸದುಪಯೋಗಪಡಿಸಿಕೊಳ್ಳಬೇಕು. ವಿದೇಶಿಯರು ವೈದ್ಯಕೀಯ ಚಿಕಿತ್ಸೆಗೆ ಭಾರತಕ್ಕೆ ಬರುತ್ತಾರೆಯೇ ಹೊರತು ಚೀನಾಕ್ಕೆ ಹೋಗುತ್ತಿಲ್ಲ’ ಎಂದು ತಿಳಿಸಿದರು.
ಮಾಜಿ ವಿದೇಶಾಂಗ ಕಾರ್ಯದರ್ಶಿ ಕೃಷ್ಣನ್ ಶ್ರೀನಿವಾಸನ್, ‘25 ವರ್ಷದಲ್ಲಿ ಚೀನಾ ಶರವೇಗದಲ್ಲಿ ಬೆಳವಣಿಗೆ ಹೊಂದಿದೆ. ಇಷ್ಟು ಅಲ್ಪ ಅವಧಿಯಲ್ಲಿ ಬೇರೆ ಯಾವುದೇ ದೇಶ ಈ ರೀತಿ ಪ್ರಗತಿ ಹೊಂದಿಲ್ಲ. ದೇಶದಲ್ಲಿ ಚೀನಿಯರು ಹೂಡಿಕೆ ಮಾಡಲು ಕೆಲವು ಅಡೆತಡೆಗಳಿವೆ. ಇದು ಕೂಡಾ ನಮಗೆ ಹಿನ್ನಡೆಯಾಗುವ ಸಾಧ್ಯತೆಗಳಿವೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.