ADVERTISEMENT

ತಾಯ್ನುಡಿ ಹಬ್ಬಕ್ಕೆ ಕೆಂಪು,ಹಳದಿ ರಂಗು

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2018, 19:14 IST
Last Updated 1 ನವೆಂಬರ್ 2018, 19:14 IST
ಕರ್ನಾಟಕ ಹಾಲು ಮಹಾ ಮಂಡಳಿಯ ಕೇಂದ್ರ ಕಚೇರಿ ಆವರಣದಲ್ಲಿ ರಾಜ್ಯೋತ್ಸವ ಆಚರಿಸಲಾಯಿತು. ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ರಾಕೇಶ್‍ಸಿಂಗ್ ಅವರು ನಂದಿನಿಯ ಖಾರ ಉತ್ಪನ್ನಗಳನ್ನು ಬಿಡುಗಡೆಗೊಳಿಸಿದರು
ಕರ್ನಾಟಕ ಹಾಲು ಮಹಾ ಮಂಡಳಿಯ ಕೇಂದ್ರ ಕಚೇರಿ ಆವರಣದಲ್ಲಿ ರಾಜ್ಯೋತ್ಸವ ಆಚರಿಸಲಾಯಿತು. ಕೆಎಂಎಫ್‌ ವ್ಯವಸ್ಥಾಪಕ ನಿರ್ದೇಶಕ ರಾಕೇಶ್‍ಸಿಂಗ್ ಅವರು ನಂದಿನಿಯ ಖಾರ ಉತ್ಪನ್ನಗಳನ್ನು ಬಿಡುಗಡೆಗೊಳಿಸಿದರು   

ಬೆಂಗಳೂರು: ನಗರದಲ್ಲಿ ಗುರುವಾರ ಕನ್ನಡ ಹಬ್ಬದ ಸಂಭ್ರಮ ಜೋರಾಗಿತ್ತು. ಎಲ್ಲೆಡೆ ಕೆಂಪು, ಹಳದಿ ಬಣ್ಣದ ಬಾವುಟಗಳು ರಾರಾಜಿಸಿದವು.

ಆಟೊ, ಬಸ್‌, ಬೈಕ್‌ಗಳಲ್ಲಿ ಕೆಂಪು ಬಣ್ಣದ ಬಲೂನ್‌ ಹಾಗೂ ಬಾವುಟಗಳು ಹಾರಾಡಿದವು. ನಗರದ ಬಹುತೇಕ ವೃತ್ತಗಳಲ್ಲಿ ಸಿಹಿ ಹಂಚಿ, ಕನ್ನಡದ ಹಾಡುಗಳನ್ನು ಹಾಕುವ ಮೂಲಕ ಹಬ್ಬದಂತೆ ರಾಜ್ಯೋತ್ಸವನ್ನು ಆಚರಿಸಿದರು.

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಎದುರಿನ ಆಟೊ ಚಾಲಕರ ಸಂಘದವರು ಧ್ವಜಾರೋಹಣ ನೆರವೇರಿಸಿದರು. ನಂತರ, ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಶಿವನಗರದ ಭುವನೇಶ್ವರಿ ಕನ್ನಡ ಸಂಘದ ವತಿಯಿಂದ ರಸಮಂಜರಿ ಆಯೋಜಿಸಲಾಯಿತು.

ADVERTISEMENT

ಕರ್ನಾಟಕ ಹಾಲು ಮಹಾಮಂಡಳಿಯ ಕೇಂದ್ರ ಕಚೇರಿ ಆವರಣದಲ್ಲಿ ರಾಜ್ಯೋತ್ಸವ ಆಚರಿಸಿ, ನಂದಿನಿಯ ಹೊಸ ಉತ್ಪನ್ನಗಳಾದ ನಂದಿನಿ ಬೆಣ್ಣೆ ಮುರುಕು, ಖಾರ ಬೂಂದಿ, ಬಾಂಬೆ ಮಿಕ್ಸರ್‌, ಮಸಾಲ ಕೋಡುಬಳೆಯನ್ನು ಬಿಡುಗಡೆಗೊಳಿಸಲಾಯಿತು.

ಜಲಮಂಡಳಿಯಲ್ಲಿ ನಾಡಗೀತೆ ಹಾಡಿ ರಾಜ್ಯೋತ್ಸವ ಆಚರಿಸಲಾಯಿತು. ಕನ್ನಡದ ಗೆಳೆಯರ ಬಳಗ ಕೂಡ ನಗರದ ವಿವಿಧ ಭಾಗಗಳಲ್ಲಿ ಕನ್ನಡದ ಹಬ್ಬ ಆಚರಿಸಿತು.

ಬೈಕ್‌ ರ‍್ಯಾಲಿ:ಜಯಕರ್ನಾಟಕ ಸಂಘಟನೆ ವತಿಯಿಂದ ರಾಜ್ಯೋತ್ಸವದ ಅಂಗವಾಗಿ ರಾಮಮೂರ್ತಿ ನಗರ ಕಲ್ಕೆರೆಯಲ್ಲಿ ಬೈಕ್ ರ‍್ಯಾಲಿಯನ್ನು ಆಯೋಜಿಸಲಾಗಿತ್ತು.

ನಗರ ಕಾರ್ಯಾಧ್ಯಕ್ಷ ಶ್ರೀನಿವಾಸ್ ಅವರು ರ‍್ಯಾಲಿಗೆ ಚಾಲನೆ ನೀಡಿದರು.

ಕೆ.ಆರ್.ಪುರ ವಿಧಾನಸಭೆ ಕ್ಷೇತ್ರದ ಅಧ್ಯಕ್ಷ ಕಲ್ಕೆರೆ ಜಿ.ಮಾದೇಶಗೌಡ, ‘ಕೆ.ಆರ್.ಪುರ ಭಾಗದಲ್ಲಿ ಪರಭಾಷಿಕರ ಸಂಖ್ಯೆ ಹೆಚ್ಚಿದೆ. ಅವರಿಗೆ ಕನ್ನಡ ಕಲಿಸುವ ಯೋಜನೆ ಹಾಕಿಕೊಂಡು ಭಾಷೆಯನ್ನು ಬೆಳೆಸಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.