ADVERTISEMENT

ರಾಮದೇವರ ಬೆಟ್ಟದಲ್ಲಿ ಕರಡಿಗಳು ಗ್ರಾಮದ ಜನರಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 1 ಜುಲೈ 2019, 19:13 IST
Last Updated 1 ಜುಲೈ 2019, 19:13 IST
ರಾಮದೇವರ ಬೆಟ್ಟದ ಬುಡದಲ್ಲಿ ಓಡಾಡುತ್ತಿರುವ ಕರಡಿಗಳು
ರಾಮದೇವರ ಬೆಟ್ಟದ ಬುಡದಲ್ಲಿ ಓಡಾಡುತ್ತಿರುವ ಕರಡಿಗಳು   

ದಾಬಸ್‌ಪೇಟೆ: ನೆಲಮಂಗಲ ತಾಲ್ಲೂಕಿನ ರಾಮದೇವರ ಬೆಟ್ಟದ ತಪ್ಪಲಿನಲ್ಲಿ ಸೋಮವಾರ ಬೆಳಿಗ್ಗೆ ಎರಡು ಕರಡಿಗಳು ಕಾಣಿಸಿಕೊಂಡು ರಾಯರಪಾಳ್ಯ, ರಾಮೇನಹಳ್ಳಿ, ಚನ್ನೋಹಳ್ಳಿ ಹಾಗೂ ಹೊಸನಿಜಗಲ್ ಗ್ರಾಮದ ಜನರಲ್ಲಿ ಆತಂಕ ಮೂಡಿಸಿವೆ.

‘ಕರಡಿಗಳು ಸಾಮಾನ್ಯವಾಗಿ ಬೆಳಿಗ್ಗೆ ಹೊತ್ತಲ್ಲಿ ಕಾಣಿಸಿಕೊಳ್ಳುವುದಿಲ್ಲ. ರಾತ್ರಿ ವೇಳೆ ತಮ್ಮ ಆಹಾರ ಹುಡುಕಿಕೊಂಡು ಹಗಲಲ್ಲಿ ಗುಡ್ಡದ ಗವಿಯಲ್ಲಿ ಇರುತ್ತವೆ.

ಬೇರೆ ಕಡೆಯಿಂದ ಬಂದ ಸಂದರ್ಭದಲ್ಲಿ ಉಳಿದುಕೊಳ್ಳುವಂತಹ ಜಾಗ ಸಿಗದಿದ್ದಾಗ ಮಾತ್ರ ಹಗಲಲ್ಲಿ ಕಾಣಿಸಿಕೊಳ್ಳುತ್ತವೆ’ ಎಂದು ನೆಲಮಂಗಲದ ವಲಯ ಅರಣ್ಯಾಧಿಕಾರಿ ಚೇತನ್ ಹೇಳಿದರು.

ADVERTISEMENT

‘ರಾಮದೇವರ ಕಾಡಿಗೆ ಹೊಂದಿಕೊಂಡಂತೆ ತುಮಕೂರು ಭಾಗದ ಅಲ್ಪ ಕಾಡು ಸೇರಿರುವುದಿಂದ ಈ ಕರಡಿಗಳು ಆ ಕಡೆಯಿಂದ ಬಂದಿರಬಹುದು. ಅರಣ್ಯ ವೀಕ್ಷಕರಿಗೆ ಅವುಗಳ ಮೇಲೆ ನಿಗಾ ವಹಿಸಲು ಹೇಳಲಾಗಿದೆ. ಜನರಿಗೆ ತೊಂದರೆಯಾದರೆ ಅವುಗಳನ್ನು ಹಿಡಿಯುವ ಪ್ರಯತ್ನ ಮಾಡಲಾಗುವುದು’ ಎಂದರು.

‘ಸುಮಾರು ಎರಡು ತಿಂಗಳಿಂದ ಕರಡಿಗಳು ಓಡಾಡುತ್ತಿವೆ. ರಾತ್ರಿ ವೇಳೆ ಆಹಾರ ಹುಡುಕಿಕೊಂಡು ಹೋಗುತ್ತಿದ್ದವು. ಈಗ ಹಗಲಲ್ಲಿಯೇ ಕಾಣಿಸಿರುವುದು ಸುತ್ತಮುತ್ತಲ ಗ್ರಾಮದ ಜನರಲ್ಲಿ ಆತಂಕ ಮೂಡಿಸಿದೆ’ ಎಂದು ರಾಯರಪಾಳ್ಯದ ವೆಂಕಟೇಶ್‌ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.