ಬೆಂಗಳೂರು: ರೋಗಿಗಳ ಆರೈಕೆ, ಸುರಕ್ಷತೆ, ಪರಿಣಾಮಕಾರಿ ಚಿಕಿತ್ಸೆ ಸೇರಿ ವಿವಿಧ ಮಾನದಂಡಗಳನ್ನು ಆಧರಿಸಿ ನೀಡಲಾಗುವ ಜಾಗತಿಕ ಮಟ್ಟದ ‘ಜಾಯಿಂಟ್ ಕಮಿಷನ್ ಇಂಟರ್ನ್ಯಾಷನಲ್’ (ಜೆಸಿಐ) ಮಾನ್ಯತೆ ರಾಮಯ್ಯ ಮೆಮೋರಿಯಲ್ ಆಸ್ಪತ್ರೆಗೆ ದೊರೆತಿದೆ.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೋಕುಲ ಎಜುಕೇಷನ್ ಫೌಂಡೇಷನ್ (ವೈದ್ಯಕೀಯ) ಅಧ್ಯಕ್ಷ ಎಂ.ಆರ್.ಜಯರಾಮ್, ‘ಆಸ್ಪತ್ರೆಯು ಒಂದೇ ಪ್ರಯತ್ನದಲ್ಲಿ ಜೆಸಿಐ ಮಾನ್ಯತೆಯನ್ನು ಪಡೆದುಕೊಂಡಿದೆ. ಇದು ಆಸ್ಪತ್ರೆ ಹೊಂದಿರುವ ಬದ್ಧತೆ ಹಾಗೂ ಗುಣಮಟ್ಟದ ಪ್ರತೀಕ. ಹೈಕೋರ್ಟ್ ನ್ಯಾಯಮೂರ್ತಿಗಳ ನಿಗಾದಲ್ಲಿ ಆಸ್ಪತ್ರೆಯ ನೈತಿಕ ಸಮಿತಿ ಮೇಲ್ವಿಚಾರಣೆಯಲ್ಲಿದೆ. ಚಿಕಿತ್ಸಾ ವಿಧಾನದ ಕುರಿತು ಸಾಕಷ್ಟು ಜಾಗೃತಿ ವಹಿಸಿದ್ದೇವೆ. ಯಾವುದೇ ಅನೈತಿಕ ಪ್ರಯೋಗಗಳು ನಡೆಯದಂತೆ ಕಟ್ಟುನಿಟ್ಟಾಗಿ ನಿಯಮಾವಳಿ ಪಾಲಿಸಲಾಗುತ್ತಿದೆ’ ಎಂದು ಹೇಳಿದರು.
‘ಆಸ್ಪತ್ರೆಯು ನಾಲ್ಕು ಬಾರಿ ರಾಷ್ಟ್ರೀಯ ಮಟ್ಟದ ಎನ್ಎಬಿಎಚ್ (ಆಸ್ಪತ್ರೆಗಳು ಮತ್ತು ಆರೋಗ್ಯ ಪೂರೈಕೆದಾರರ ರಾಷ್ಟ್ರೀಯ ಮಾನ್ಯತೆ ಮಂಡಳಿ) ಪ್ರಮಾಣಪತ್ರ ಪಡೆದಿದೆ. ಪಾರ್ಶ್ವವಾಯು ಮತ್ತು ಎದೆನೋವು ಕೇಂದ್ರದ ಚಿಕಿತ್ಸೆಗಾಗಿ ಅಮೆರಿಕನ್ ಸ್ಟ್ರೋಕ್ ಅಸೋಸಿಯೇಷನ್ (ಎಎಸ್ಎ) ಹಾಗೂ ಅಮೆರಿಕನ್ ಹಾರ್ಟ್ ಅಸೋಸಿಯೇಷನ್ (ಎಎಚ್ಎ) ಪ್ರಮಾಣಪತ್ರ ದೊರೆತಿದೆ’ ಎಂದು ತಿಳಿಸಿದರು.
ಫೌಂಡೇಷನ್ನ ಆರೋಗ್ಯ ಸೇವೆಗಳ ಮುಖ್ಯ ಕಾರ್ಯನಿರ್ವಾಹಕ ಡಾ. ನಾಗೇಂದ್ರ ಸ್ವಾಮಿ ಎಸ್.ಸಿ., ‘237 ಮಾನದಂಡಗಳ ಆಧಾರದಲ್ಲಿ ರಾಮಯ್ಯ ಆಸ್ಪತ್ರೆಯನ್ನು ಜಿಐಸಿ ಸಮೀಕ್ಷೆಗೆ ಒಳಪಡಿಸಿತ್ತು. ಎಲ್ಲ ಮಾನದಂಡಗಳನ್ನು ಆಸ್ಪತ್ರೆ ಹೊಂದಿದ್ದರಿಂದ ಮಾನ್ಯತೆ ದೊರೆತಿದೆ’ ಎಂದರು.
ಈ ಮಾನ್ಯತೆ ಪ್ರಯುಕ್ತ ಬಳಿಕ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ‘ಬೆಂಗಳೂರು ನಗರ ವೈದ್ಯಕೀಯ ಹಬ್ ಆಗಿ ಮಾರ್ಪಟಿದೆ. ಚಿಕಿತ್ಸೆಗೆಂದು ದೇಶ-ವಿದೇಶದಿಂದ ಸಾವಿರಾರು ಜನರು ನಗರಕ್ಕೆ ಬರುತ್ತಾರೆ. ಅವರು ನಗರದಲ್ಲಿ ಉತ್ತಮ ಆಸ್ಪತ್ರೆ ಯಾವುದೆಂದು ಹುಡುಕುವಾಗ, ಜೆಸಿಐ ಮಾನ್ಯತೆ ಹೆಚ್ಚು ಅನುಕೂಲವಾಗುತ್ತದೆ’ ಎಂದು ಹೇಳಿದರು.
ಸಂಸ್ಥೆಯನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಶ್ಲಾಘಿಸಿದರು. ಗೋಕುಲ ಎಜುಕೇಷನ್ ಫೌಂಡೇಷನ್ ಅಧ್ಯಕ್ಷ ಎಂ.ಆರ್.ಸೀತಾರಾಮ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.