ADVERTISEMENT

ರಾಮೇಶ್ವರಂ ಕೆಫೆಯಲ್ಲಿ ಹುಳು ಪತ್ತೆ; ಸುಳ್ಳು ಆರೋಪ: ದೂರು

​ಪ್ರಜಾವಾಣಿ ವಾರ್ತೆ
Published 24 ಜುಲೈ 2025, 16:14 IST
Last Updated 24 ಜುಲೈ 2025, 16:14 IST
<div class="paragraphs"><p>ದಿ ರಾಮೇಶ್ವರಂ ಕೆಫೆ</p></div>

ದಿ ರಾಮೇಶ್ವರಂ ಕೆಫೆ

   

ಪಿಟಿಐ ಚಿತ್ರ

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರಾಮೇಶ್ವರಂ ಕೆಫೆಯ ಔಟ್‌ಲೆಟ್‌ನಲ್ಲಿ ನೀಡಲಾದ ಆಹಾರದಲ್ಲಿ ಹುಳುವೊಂದು ಪತ್ತೆಯಾಗಿದೆ ಎಂದು ಸುಳ್ಳು ಆರೋಪ ಹೊರಿಸಿ, ಹಣ ಸುಲಿಗೆಗೆ ಯತ್ನಿಸಿದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಶಾಖೆಯ ಮುಖ್ಯಸ್ಥ ಸುಮಂತ್ ಅವರು ನಗರ ಪೊಲೀಸ್ ಕಮಿಷನರ್‌ ಸೀಮಂತ್ ಕುಮಾರ್ ಸಿಂಗ್‌ ಅವರಿಗೆ ದೂರು ನೀಡಿದ್ದಾರೆ.

ADVERTISEMENT

ಕೆಫೆಗೆ ಬಂದ ಕರೆಗಳ ವಿವರ, ವಾಟ್ಸ್‌ಆ್ಯಪ್‌ನಲ್ಲಿ ಬಂದ ಸಂದೇಶದ ಸ್ಕ್ರೀನ್‌ಶಾಟ್‌ಗಳು ಮತ್ತು ಇತರೆ ದಾಖಲೆಗಳನ್ನು ಪೊಲೀಸರಿಗೆ ಸಲ್ಲಿಸಿ, ಬ್ಲ್ಯಾಕ್‌ಮೇಲ್ ಪ್ರಯತ್ನದ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಸುಮಂತ್ ಅವರು ಕೋರಿದ್ದಾರೆ.

‘ಗುರುವಾರ ಬೆಳಿಗ್ಗೆ ಏಳು ವ್ಯಕ್ತಿಗಳ ಗುಂಪು ಬಂದು, ಕೆಫೆಯಲ್ಲಿ ಗೊಂದಲ ಸೃಷ್ಟಿಸಿತು. ಬಡಿಸಿದ ಆಹಾರದಲ್ಲಿ ಹುಳವಿದೆ ಎಂದು ಸುಳ್ಳು ಆರೋಪ ಹೊರಿಸಿ, ನಂತರ ವ್ಯಕ್ತಿಗಳು ಪರಿಹಾರ ನೀಡದಿದ್ದರೆ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದರು. ಕೆಲ ಹೊತ್ತಿನ ಬಳಿಕ ಅಪರಿಚಿತ ಸಂಖ್ಯೆಯಿಂದ ಕರೆಯೊಂದು ಬಂತು. ಕರೆ ಮಾಡಿದ್ದ ವ್ಯಕ್ತಿ ₹25 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದಿ ರಾಮೇಶ್ವರ ಕೆಫೆಯ ಸಂಸ್ಥಾಪಕಿ ದಿವ್ಯಾ ರಾಘವ್ ಅವರು ಘಟನೆಯ ಸಂಬಂಧ ಮಾಹಿತಿ ನೀಡಿದ್ದು, ‘ಆಹಾರ ತಯಾರಿಕೆಯ ಸುರಕ್ಷತೆ ಮತ್ತು ನೈರ್ಮಲ್ಯದ ಬಗ್ಗೆ ಹೆಚ್ಚಿನ ಗಮನ ವಹಿಸುತ್ತೇವೆ. ವಿಶೇಷವಾಗಿ ವಿಮಾನ ನಿಲ್ದಾಣಗಳಂತಹ ಸೂಕ್ಷ್ಮ ಸ್ಥಳಗಳಲ್ಲಿ ನೈರ್ಮಲ್ಯ ತಪಾಸಣೆಗಳು ಕಡ್ಡಾಯವಾಗಿರುತ್ತವೆ. ಹಣವನ್ನು ಸುಲಿಗೆ ಮಾಡಲು ಮತ್ತು ನಮ್ಮ ಬ್ರ್ಯಾಂಡ್‌ಗೆ ಕಳಂಕ ತರುವ ಉದ್ದೇಶದಿಂದ ಕಿಡಿಗೇಡಿಗಳು ಈ ಪ್ರಯತ್ನ ನಡೆಸಿದ್ದಾರೆ. ಅವರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.