ADVERTISEMENT

ಶೇ 15ರಷ್ಟು ಮೀಸಲಾತಿ ನೀಡುವಂತೆ ಆಲ್‌ ಇಂಡಿಯಾ ಮಿಲ್ಲಿ ಕೌನ್ಸಿಲ್ ಆಗ್ರಹ

ರಂಗನಾಥ್ ಆಯೋಗದ ಶಿಫಾರಸು ಜಾರಿಗೆ ಆಲ್‌ ಇಂಡಿಯಾ ಮಿಲ್ಲಿ ಕೌನ್ಸಿಲ್ ಒತ್ತಾಯ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2024, 15:39 IST
Last Updated 23 ಫೆಬ್ರುವರಿ 2024, 15:39 IST
   

ಬೆಂಗಳೂರು: ‘ನ್ಯಾಯಮೂರ್ತಿ ರಂಗನಾಥ್ ಆಯೋಗವು ಅಲ್ಪಸಂಖ್ಯಾತರಿಗೆ ಶಿಫಾರಸು ಮಾಡಿರುವ ಶೇ 15ರಷ್ಟು ಮೀಸಲಾತಿಯನ್ನು ಕೂಡಲೇ ಜಾರಿಗೊಳಿಸಬೇಕು. ಆದರೆ, ಈಗಿನ ಕೇಂದ್ರ ಸರ್ಕಾರ ಈ ಬಗ್ಗೆ ಮೌನ ವಹಿಸಿದೆ’ ಎಂದು ಆಲ್‌ ಇಂಡಿಯಾ ಮಿಲ್ಲಿ ಕೌನ್ಸಿಲ್‌ ಆರೋಪಿಸಿದೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೌನ್ಸಿಲ್‌ನ ರಾಜ್ಯ ಘಟಕದ ಉಪಾಧ್ಯಕ್ಷ ನೌಶಾದ್ ಆಲಂ ಕಾಸಿಮಿ, ‘ಕೇಂದ್ರ ಸರ್ಕಾರ ಉದ್ಯೋಗ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಮೇಲ್ವರ್ಗದ ಆಧಾರದ ಮೇಲೆ ಮೀಸಲಾತಿ ಒದಗಿಸಿದ್ದು, ಇದು ಸಂವಿಧಾನದ ವಿರುದ್ಧವಾಗಿದೆ. ಆದ್ದರಿಂದ, ಎಲ್ಲ ಧಾರ್ಮಿಕ ಅಲ್ಪಸಂಖ್ಯಾತರಿಗೆ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಪ್ರತ್ಯೇಕ ಮೀಸಲಾತಿಯನ್ನು ಒದಗಿಸಬೇಕು’ ಎಂದು ಆಗ್ರಹಿಸಿದರು.

‘2006ರಲ್ಲಿ ನ್ಯಾಯಮೂರ್ತಿ ರಾಜೇಂದ್ರ ಸಾಚಾರ್‌ ನೇತೃತ್ವದ ಸಮಿತಿ ಪ್ರಕಾರ ಮುಸ್ಲಿಂ ಸಮುದಾಯ ಸಾಮಾಜಿಕ, ಆರ್ಥಿಕ, ಔದ್ಯೋಗಿಕ ಮತ್ತು ರಾಜಕೀಯ ರಂಗದಲ್ಲಿ ಹಿಂದುಳಿದಿದೆ. ಈ ಸಮುದಾಯದ ಏಳಿಗೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ವಿಶೇಷವಾಗಿ ಶೈಕ್ಷಣಿಕ ಮತ್ತು ಔದ್ಯೋಗಿಕ ರಂಗದಲ್ಲಿ ಪ್ರಾತಿನಿಧ್ಯ ದೊರಕಿಸಬೇಕು ಎಂದು ಶಿಫಾರಸು ಮಾಡಿದೆ’ ಎಂದರು.

ADVERTISEMENT

‘ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರಿಗೆ ಪ್ರಾತಿನಿಧ್ಯ ಒದಗಿಸಬೇಕು. ಸಮಾನ ಅವಕಾಶಗಳ ಆಯೋಗ ಸ್ಥಾಪಿಸಬೇಕು. ಕೇಂದ್ರ ಮತ್ತು ರಾಜ್ಯ ಬಜೆಟ್‌ನಲ್ಲಿ ವಿವಿಧ ಅಲ್ಪಸಂಖ್ಯಾತ ಸಮುದಾಯಗಳ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಅನುದಾನ ಒದಗಿಸಬೇಕು’ ಎಂದು ಒತ್ತಾಯಿಸಿದರು.

‘ವಕ್ಫ್ ಆಸ್ತಿ ರಕ್ಷಣೆ ಮಾಡುವುದರ ಜೊತೆಗೆ ವಕ್ಫ್‌ ಕಾಯಿದೆ 1995ರ ಪರಿಣಾಮಕಾರಿ ಅನುಷ್ಠಾನಗೊಳಿಸಬೇಕು. ಯುಎಪಿಎ ಕಾಯ್ದೆಗೆ ತಂದಿರುವ ತಿದ್ದುಪಡಿ ಹಿಂಪಡೆಯಬೇಕು. ಪೌರತ್ವ ತಿದ್ದುಪಡಿ ಕಾಯ್ದೆ‌ಯನ್ನು ರದ್ದುಪಡಿಸಬೇಕು. ಅಲ್ಪಸಂಖ್ಯಾತರ ಆಯೋಗಕ್ಕೆ ನ್ಯಾಯಾಂಗ ಅಧಿಕಾರವನ್ನು ಒದಗಿಸಬೇಕು’ ಎಂದು ಹೇಳಿದರು.

ಕೌನ್ಸಿಲ್‌ನ ರಾಜಕೀಯ ಕಾರ್ಯದರ್ಶಿ ಸೈಯದ್ ಶಫೀವುಲ್ಲಾ, ಪ್ರಧಾನ ಕಾರ್ಯದರ್ಶಿ ಸೈಯದ್ ಶಾಹಿದ್ ಅಹ್ಮದ್‌ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.