
ಬೆಂಗಳೂರು: ವಿರಳ ಕಾಯಿಲೆ ಪತ್ತೆಯ ಜತೆಗೆ ಭ್ರೂಣದ ಆರೋಗ್ಯ ವೃದ್ಧಿಗೆ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ ಪ್ರಸವಪೂರ್ವ ತಪಾಸಣೆ ಪ್ರಾರಂಭಿಸಲಾಗಿದೆ.
ವಂಶವಾಹಿ ಸಮಸ್ಯೆಗಳಿಂದಾಗಿ ಸಿಕಲ್–ಸೆಲ್, ಅನೀಮಿಯಾ, ತಲಸ್ಸೇಮಿಯಾ, ಹಿಮೋಫೀಲಿಯಾ, ಪೊಂಪೆ, ಗೌಚರ್ ಸೇರಿ ವಿವಿಧ ವಿರಳ ಕಾಯಿಲೆಗಳಿಗೆ ಬಾಧಿತರಾಗುವ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ಈ ರೀತಿಯ ವಿರಳ ಕಾಯಿಲೆ ಎದುರಿಸುತ್ತಿರುವವರಿಗೆ ನಿರಂತರ ಚಿಕಿತ್ಸೆ ಹಾಗೂ ಔಷಧ ಅಗತ್ಯ. ಆದರೆ, ಈ ಕಾಯಿಲೆಗಳಿಗೆ ಔಷಧ ವೆಚ್ಚವೂ ದುಬಾರಿ ಆಗಿರುವುದರಿಂದ ಬಹುತೇಕ ಮಕ್ಕಳ ಪಾಲಕರು ಚಿಕಿತ್ಸೆಯನ್ನೇ ಸ್ಥಗಿತ ಮಾಡುತ್ತಿದ್ದಾರೆ. ಹೀಗಾಗಿ, ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯು ‘ಫೀಟಲ್ ಮೆಡಿಸಿನ್’ ವಿಭಾಗವನ್ನು (ಎಫ್ಎಂಸಿ) ಪ್ರಾರಂಭಿಸಿದೆ. ಈಗಾಗಲೇ 68 ಗರ್ಭಿಣಿಯರಿಗೆ ಸಂಸ್ಥೆಯ ಈ ಕೇಂದ್ರದಲ್ಲಿ ತಪಾಸಣೆ ನಡೆಸಲಾಗಿದೆ.
ಸರ್ಕಾರಿ ವ್ಯವಸ್ಥೆಯಡಿ ಕಾರ್ಯಾರಂಭಿಸಲಾದ ಪ್ರಥಮ ಕೇಂದ್ರ ಇದಾಗಿದೆ. ಭ್ರೂಣದ ಬೆಳವಣಿಗೆ ಮತ್ತು ಆರೋಗ್ಯದ ಮೌಲ್ಯಮಾಪನ, ಭ್ರೂಣ ಕಾಯಿಲೆಗಳ ಪತ್ತೆ, ನಿರ್ವಹಣೆ ಹಾಗೂ ಚಿಕಿತ್ಸೆಗೆ ಈ ಕೇಂದ್ರ ಸಹಕಾರಿಯಾಗಲಿದೆ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತವು (ಕೆಪಿಟಿಸಿಎಲ್) ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್ಆರ್) ಅಡಿ ಈ ಕೇಂದ್ರ ನಿರ್ಮಾಣಕ್ಕೆ ನೆರವು ನೀಡಿದ್ದು, ಒಟ್ಟು ₹ 1.5 ಕೋಟಿ ವೆಚ್ಚದಲ್ಲಿ ಕೇಂದ್ರ ನಿರ್ಮಾಣವಾಗಿದೆ. ಒಟ್ಟು 120 ಸ್ಕ್ಯಾನ್ಗಳನ್ನು ಈ ಕೇಂದ್ರದಲ್ಲಿ ನಡೆಸಲಾಗಿದ್ದು, ನೋಂದಾಯಿತರಲ್ಲಿ ಬಹತೇಕ ಗರ್ಭಿಣಿಯರಿಗೆ ಮತ್ತೊಮ್ಮೆ ಸ್ಕ್ಯಾನಿಂಗ್ ಮಾಡಲಾಗಿದೆ.
ಆರೋಗ್ಯಯುತ ಮಗು: ಅಂಗ ನ್ಯೂನತೆ, ಬುದ್ಧಿಮಾಂದ್ಯ, ದೃಷ್ಟಿ ಮತ್ತು ಶ್ರವಣ ದೋಷ, ಮಿದುಳಿನ ಸಮಸ್ಯೆ, ರಕ್ತ ಕಣಗಳ ಸಮಸ್ಯೆ, ಶ್ವಾಸಕೋಶದ ಸಮಸ್ಯೆ ಸೇರಿ ನವಜಾತ ಶಿಶುಗಳಲ್ಲಿ ಕಾಣಿಸಿಕೊಳ್ಳುವ ವಿವಿಧ ಸಮಸ್ಯೆಗಳನ್ನು ತಡೆಯಲು ಈ ಕೇಂದ್ರ ನೆರವಾಗಲಿದೆ. ಕೇಂದ್ರಕ್ಕೆ ಬರುವವರಿಗೆ ಆಪ್ತ ಸಮಾಲೋಚನೆಯನ್ನೂ ಒದಗಿಸಲಾಗುತ್ತದೆ. ಈಗಾಗಲೇ ಮೊದಲ ಮಗು ಆನುವಂಶಿಕ ಸಮಸ್ಯೆಗೆ ಒಳಗಾಗಿದ್ದಲ್ಲಿ, ಎರಡನೇ ಮಗು ಈ ಸಮಸ್ಯೆಗೆ ಒಳಗಾಗದಂತೆ ತಡಯಲು ಕೇಂದ್ರ ನೆರವಾಗುತ್ತದೆ.
‘ಗರ್ಭಾವಸ್ಥೆಯ ಮೊದಲ ಮೂರು ತಿಂಗಳ ಒಳಗೆ ಭ್ರೂಣದ ಅಸಹಜತೆ, ಅಂಗ ನ್ಯೂನತೆ, ರಚನಾತ್ಮಕ ಹಾಗೂ ಆನುವಂಶಿಕ ಸಮಸ್ಯೆಗಳು ಸೇರಿ ಒಟ್ಟಾರೆ ಆರೋಗ್ಯವನ್ನು ನಿರ್ಣಯಿಸಲಾಗುತ್ತದೆ. ತಪಾಸಣೆ ಬಳಿಕ ಸಮಸ್ಯೆ ದೃಢಪಟ್ಟಲ್ಲಿ ಭ್ರೂಣಾವಸ್ಥೆಯಲ್ಲಿಯೇ ಚಿಕಿತ್ಸೆ ನೀಡಿ, ಸಮಸ್ಯೆ ಪರಿಹರಿಸಲಾಗುವುದು. ವಿವಿಧ ಸರ್ಕಾರಿ ಆರೋಗ್ಯ ವಿಮೆಯಡಿ ಬಿಪಿಎಲ್ ಕುಟುಂಬದವರಿಗೆ ಕೇಂದ್ರದಲ್ಲಿ ದುಬಾರಿ ವೈದ್ಯಕೀಯ ಚಿಕಿತ್ಸೆಯನ್ನು ಉಚಿತವಾಗಿ ಒದಗಿಸಲಾಗುತ್ತದೆ’ ಎಂದು ಸಂಸ್ಥೆಯ ನಿರ್ದೇಶಕ ಡಾ. ಸಂಜಯ್ ಕೆ.ಎಸ್. ತಿಳಿಸಿದರು.
ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿರುವ ಹಾಸಿಗೆಗಳು- 450
ಸಂಸ್ಥೆಗೆ ಪ್ರತಿನಿತ್ಯ ಭೇಟಿ ನೀಡುವ ಹೊರರೋಗಿಗಳು- 500ರಿಂದ 600
ಆನುವಂಶಿಕ ಕಾಯಿಲೆಗಳ ಪತ್ತೆಗೆ ಎಫ್ಎಂಸಿ ಕೇಂದ್ರದಲ್ಲಿ ತಪಾಸಣೆ ಪ್ರಾರಂಭಿಸಲಾಗಿದೆ. ಜನನಪೂರ್ವವೇ ಸಮಸ್ಯೆ ಪತ್ತೆ ಮಾಡಿ ಚಿಕಿತ್ಸೆ ಒದಗಿಸಲು ಕೇಂದ್ರ ನೆರವಾಗುತ್ತಿದೆಡಾ. ಸಂಜಯ್ ಕೆ.ಎಸ್. ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ನಿರ್ದೇಶಕ
ಆಯ್ದ ಪ್ರಕರಣಗಳಲ್ಲಿ ಮಾತ್ರ ಪರೀಕ್ಷೆ
ತಜ್ಞ ವೈದ್ಯರನ್ನು ಒಳಗೊಂಡ ಈ ಕೆಂದ್ರವು ಎಲ್ಲ ಗರ್ಭಿಣಿಯರನ್ನು ಪರೀಕ್ಷೆಗೆ ಒಳಪಡಿಸುವುದಿಲ್ಲ. ಆನುವಂಶಿಕ ಕಾಯಿಲೆಯ ಕೌಟುಂಬಿಕ ಇತಿಹಾಸ ಹೊಂದಿರುವ ಗರ್ಭಿಣಿಯರು ಅಲ್ಟ್ರಾಸೌಂಡ್ ಸ್ಯಾನಿಂಗ್ ಮತ್ತು ರಕ್ತ ಪರೀಕ್ಷೆ ವೇಳೆ ಅಪರೂಪದ ಕಾಯಿಲೆಯ ಅಪಾಯ ಗೋಚರಿಸಿದಲ್ಲಿ ಅಸಹಜತೆ ಕಂಡುಬಂದಲ್ಲಿ ಅಂತಹವರನ್ನು ನೋಂದಾಯಿಸಿಕೊಂಡು ಈ ಕೇಂದ್ರದಲ್ಲಿ ‘ಕೋರಿಯಾನಿಕ್ ವಿಲ್ಲಸ್ ಬಯಾಪ್ಸಿ’ ಸೇರಿ ವಿವಿಧ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಇದಕ್ಕೂ ಮೊದಲು ಸಮಾಲೋಚನೆ ನಡೆಸಲಾಗುತ್ತದೆ. ಭ್ರೂಣದಲ್ಲಿ ಸರಿಪಡಿಸಲಾಗದ ಗಂಭೀರ ಸ್ವರೂಪದ ಸಮಸ್ಯೆ ಕಂಡುಬಂದಲ್ಲಿ ಕಾನೂನು ಪ್ರಕಾರ ನಿಗದಿತ ಅವಧಿಯೊಳಗೆ ಗರ್ಭಪಾತಕ್ಕೆ ಕೇಂದ್ರ ನೆರವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.