ಬೆಂಗಳೂರು: 'ಪಂಪ, ರನ್ನ, ಕುಮಾರವ್ಯಾಸರು ಬರೆದದ್ದು ಪುಸ್ತಕ ಭಾಷೆ. ಆದರೆ, ರತ್ನಾಕರವರ್ಣಿ ತುಳು ಮತ್ತು ಕನ್ನಡ ಮಿಶ್ರಿತ ಹಾಗೂ ಮಾತನಾಡುವ ಕನ್ನಡದಲ್ಲಿ ಹತ್ತು ಸಾವಿರ ಪದ್ಯಗಳನ್ನು ರಚಿಸಿದ’ ಎಂದು ಸಾಹಿತಿ ಹಂಪ ನಾಗರಾಜಯ್ಯ ಹೇಳಿದರು.
ದಕ್ಷಿಣ ಕನ್ನಡ ಜೈನ ಮೈತ್ರಿಕೂಟ ನಗರದಲ್ಲಿ ಆಯೋಜಿಸಿದ್ದ 38ನೇ ವಾರ್ಷಿಕೋತ್ಸವ ಮತ್ತು ಮಹಾಕವಿ ರತ್ನಾಕರವರ್ಣಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
‘ಮಹಾನ್ ಕವಿಯ ಓಲೆಗರಿ ನನಗೆ ದೊರೆತು ಸುಮಾರು 380 ಹಾಡುಗಳನ್ನು ಸಂಪಾದಿಸಿದೆ. ಕನ್ನಡ ಸಾಹಿತ್ಯದಲ್ಲಿ ಅನೇಕ ಕವಿಗಳು ಸಮುದ್ರವನ್ನು ನೋಡದೆ ಅದನ್ನು ವರ್ಣಿಸಿದ್ದಾರೆ. ಆದರೆ, ಸಮುದ್ರವನ್ನು ಕಂಡು, ಮುಟ್ಟಿ, ಅದರ ಅಂತರಾಳ ಅರಿತು ವರ್ಣಿಸಿದ ಒಬ್ಬನೇ ಕವಿ ಎಂದರೆ ಅದು ರತ್ನಾಕರವರ್ಣಿ’ ಎಂದು ಹೇಳಿದರು.
ಜೈನ ಬಸದಿಗಳ ದಾಖಲೀಕರಣ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ಪ್ರಚಾರ ಮಾಡುತ್ತಿರುವ ನೇರಂಕಿ ಪಾರ್ಶ್ವನಾಥ ಅವರ ಸಮಾಜಮುಖಿ ಸಾಧನೆ ಮೆಚ್ಚಿ ದಕ್ಷಿಣ ಕನ್ನಡ ಜೈನ ಮೈತ್ರಿಕೂಟ ಮಹಾಕವಿ ರತ್ನಾಕರವರ್ಣಿ ಪ್ರಶಸ್ತಿ ನೀಡಿ ಗೌರವಿಸಿತು.
ದಕ್ಷಿಣ ಕನ್ನಡ ಜೈನ ಮೈತ್ರಿಕೂಟದ ಸ್ಥಾಪಕ ಅಧ್ಯಕ್ಷ ಡಿ.ಸುರೇಂದ್ರ ಕುಮಾರ್, ಸ್ಥಾಪಕ ಕಾರ್ಯಾಧ್ಯಕ್ಷ ಕೆ.ಬಿ.ಯುವರಾಜ್ ಬಲ್ಲಾಳ್, ಕಾರ್ಯಕಾರಿ ಸಮಿತಿ ಅಧ್ಯಕ್ಷೆ ಅನಿತಾ ಸುರೇಂದ್ರ ಕುಮಾರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.