ADVERTISEMENT

2 ರಿಂದ 7 ಪಾಲಿಕೆಗಳಾಗಿ ಬಿಬಿಎಂಪಿ ವಿಂಗಡನೆಗೆ ಶಿಫಾರಸು: ರಿಜ್ವಾನ್‌ ಅರ್ಷದ್‌

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2025, 11:13 IST
Last Updated 24 ಫೆಬ್ರುವರಿ 2025, 11:13 IST
<div class="paragraphs"><p>ಬಿಬಿಎಂಪಿ&nbsp;</p></div>

ಬಿಬಿಎಂಪಿ 

   

ಬೆಂಗಳೂರು: ‘ಬೃಹತ್‌ ಬೆಂಗಳೂರು ಮಹಾನಗರಪಾಲಿಕೆಯನ್ನು (ಬಿಬಿಎಂಪಿ) ಎರಡರಿಂದ ಗರಿಷ್ಠ ಏಳು ಸಣ್ಣ ಪಾಲಿಕೆಗಳಾಗಿ ವಿಂಗಡನೆ ಮಾಡಬೇಕೆಂದು ಸಲಹೆ ನೀಡಿದ್ದೇವೆ. ಸಣ್ಣ ಪಾಲಿಕೆಗಳು ಉತ್ತಮ ಅಭಿವೃದ್ಧಿ, ದಕ್ಷ ಆಡಳಿತಕ್ಕೆ ಪೂರಕ ಆಗಲಿದೆ’ ಎಂದು ‘ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ– 2024’ ಅನ್ನು ಪರಿಶೀಲಿಸಿ ವರದಿ ಸಲ್ಲಿಸಲು ರಚಿಸಲಾಗಿರುವ ವಿಧಾನ ಮಂಡಲದ ಜಂಟಿ ಪರಿಶೀಲನಾ ಸಮಿತಿಯ ಅಧ್ಯಕ್ಷ ರಿಜ್ವಾನ್‌ ಅರ್ಷದ್‌ ಹೇಳಿದರು.

ಸಮಿತಿ ಸಿದ್ಧಪಡಿಸಿರುವ ವರದಿಯನ್ನು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಅವರಿಗೆ ಸೋಮವಾರ ಸಲ್ಲಿಸಿದ ನಂತರ ಮಾತನಾಡಿದ ಅವರು, ‘ಒಂದೇ ಬಾರಿಗೆ ಏಳು ಪಾಲಿಕೆ ರಚನೆ ಮಾಡಬೇಕು ಎಂದಿಲ್ಲ. ಈ ಬಗ್ಗೆ ಸಂದರ್ಭಕ್ಕೆ ಅನುಗುಣವಾಗಿ ಸರ್ಕಾರ ತೀರ್ಮಾನ ಕೈಗೊಳ್ಳಬೇಕೆಂದು ಶಿಫಾರಸು ಮಾಡಿದ್ದೇವೆ’ ಎಂದರು.

ADVERTISEMENT

‘ವರದಿಯನ್ನು ಸಭಾಧ್ಯಕ್ಷರಿಗೆ ಸಲ್ಲಿಸಿದ್ದೇವೆ. ಕಳೆದ ಐದು ತಿಂಗಳು ಈ ಮಸೂದೆಗೆ ಸಂಬಂಧಿಸಿದಂತೆ ವಿವಿಧ ಕಡೆ ಸಭೆಗಳನ್ನು ನಡೆಸಿದ್ದೇವೆ‌.‌ ಕಾನೂನು ತಜ್ಞರು, ಬೆಂಗಳೂರು ನಗರವನ್ನು ಬಲ್ಲವರ ಜೊತೆ ಸಮಾಲೋಚನೆ ನಡೆಸಿದ್ದೇವೆ. ಸಾರ್ವಜನಿಕರಿಂದಲೂ ಸಲಹೆ, ಸೂಚನೆ, ಅಭಿಪ್ರಾಯ ಸಂಗ್ರಹಿಸಿದ್ದೇವೆ’ ಎಂದರು.

‘ಬೆಂಗಳೂರು ನಗರ ದೇಶದ ಆರ್ಥಿಕತೆಯ ಕೇಂದ್ರ ಬಿಂದು. ಹಲವರಿಗೆ ಕನಸಿನ ನಗರ. ಅದಕ್ಕೆ ಪೂರಕವಾದ ಆಡಳಿತ ಶಕ್ತಿ, ಜನರಿಗೆ ಅಗತ್ಯವಾದ ಸವಲತ್ತು ಕೊಡುವ ಆಡಳಿತಾತ್ಮಕ ಮಾದರಿಯೊಂದನ್ನು ಸಿದ್ಧಪಡಿಸಬೇಕಿತ್ತು. ಹಾಲಿ ಬೆಂಗಳೂರು ಮಹಾನಗರ ಪಾಲಿಕೆಯಿಂದ ಜನರಿಗೆ ಸಹಾಯ ಆಗುತ್ತಿದೆಯೇ ಎಂದು ಕೇಳಿದಾಗ ಸಾರ್ವಜನಿಕರು ಪರ್ಯಾಯ ವ್ಯವಸ್ಥೆ ಬೇಕೆಂದು ಒಕ್ಕೊರಲಿನಿಂದ ಸಲಹೆ ನೀಡಿದ್ದಾರೆ‌. ಒಂದೇ ಪಾಲಿಕೆಯಿಂದ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದು ಸ್ಪಷ್ಟವಾಗಿದೆ’ ಎಂದರು.

‘ಸದ್ಯ ಬಿಬಿಎಂಪಿ 870 ಚದರ ಕಿ.ಮೀ. ವ್ಯಾಪ್ತಿಯಲ್ಲಿದೆ. 1.51 ಕೋಟಿ ಜನಸಂಖ್ಯೆಯಿದೆ. ಬೆಂಗಳೂರಿನಲ್ಲಿರುವ ವಿವಿಧ ನಗರ ಮೂಲಸೌಕರ್ಯ ಏಜೆನ್ಸಿಗಳ ಮಧ್ಯೆ ಸಮನ್ವಯ ಇಲ್ಲ. ಸಮನ್ವಯ ಸಾಧಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಮಾಡಬೇಕಿದೆ. ವಿಧಾನಸಭಾ ಕ್ಷೇತ್ರವಾರು ಸಮಾಲೋಚನಾ ಸಮಿತಿ ರಚನೆ ಮಾಡಲು ಸಲಹೆ ನೀಡಿದ್ದೇವೆ. ಸಣ್ಣ ಪಾಲಿಕೆಗಳನ್ನು ರಚಿಸಿ ಪ್ರತಿ ಪಾಲಿಕೆಗಳಲ್ಲಿ ಲೆಕ್ಕಪರಿಶೋಧನೆ ಮಾಡಬೇಕೆಂದು ಶಿಫಾರಸು ಮಾಡಿದ್ದೇವೆ. ಮೇಯರ್ ಅಧಿಕಾರಾವಧಿ 30 ತಿಂಗಳು ಇರಬೇಕು.ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಲಹೆ ನೀಡಿದ್ದೇವೆ’ ಎಂದರು.

‘ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಮುಖ್ಯಮಂತ್ರಿ ಮುಖ್ಯಸ್ಥರಾಗಿರುತ್ತಾರೆ. ಬೆಂಗಳೂರು ನಗರಾಭಿವೃದ್ಧಿ ಸಚಿವರು ಪ್ರಾಧಿಕಾರದ ಉಪಾಧ್ಯಕ್ಷರಾಗಿರುತ್ತಾರೆ. ಮೆಟ್ರೊ, ಬಿಡಿಎ, ಜಲಮಂಡಳಿ ಯಥಾರೀತಿ ಮುಂದುವರಿಯಲಿವೆ. ಪಾಲಿಕೆ ವಿಂಗಡನೆ ಮಾಡಿದಾಗ ಆದಾಯ ಸಂಗ್ರಹವನ್ನು ಗಮನದಲ್ಲಿ ಇಟ್ಟುಕೊಂಡು ಪಾಲಿಕೆ ರಚನೆ ಮಾಡುವಂತೆ ಸಲಹೆ ನೀಡಿದ್ದೇವೆ. ಆದಾಯ ಕೊರತೆ ಆಗದಂತೆ ಪಾಲಿಕೆ ರಚನೆ ಮಾಡಲು ಸಲಹೆ ಮಾಡಿದ್ದೇವೆ. ಸದ್ಯದ ಸ್ಥಿತಿಯಲ್ಲಿ ಪಾರದರ್ಶಕತೆ ಇಲ್ಲ. ಪ್ರತಿ ಪಾಲಿಕೆಗೆ 100ರಿಂದ 125 ವಾರ್ಡ್ ಇರಬೇಕು ಎಂದು ಸಲಹೆ ನೀಡಿದ್ದೇವೆ. ಹೀಗೆ ರಚನೆಯಾಗುವ ಪಾಲಿಕೆಗಳಿಗೆ ಸಂಪೂರ್ಣ ಸ್ವಾಯತ್ತತೆ ಇರಲಿದೆ. ಕಾಲಮಿತಿಯಲ್ಲೇ ಚುನಾವಣೆ ಆಗಬೇಕು. ಕೇಂದ್ರ ಸರ್ಕಾರ ಜೂನ್‌ ಅಂತ್ಯದೊಳಗೆ ವಾರ್ಡ್ ಗಡಿ ನಿಗದಿ ಮಾಡಬೇಕು. ಜುಲೈ ವೇಳೆಗೆ ಈ ಮಸೂದೆ ಪ್ರಕಾರ ಚುನಾವಣೆ ನಡೆಸಬಹುದು’ ಎಂದೂ ಅವರು ಹೇಳಿದರು.

‘ಹೊಸ ಪಾಲಿಕೆಗಳಿಗೆ ಬೆಂಗಳೂರು ದಕ್ಷಿಣ, ಬೆಂಗಳೂರು ಪೂರ್ವ, ಬೆಂಗಳೂರು ಪಶ್ಚಿಮ ಹೀಗೆ ಹೆಸರು ಇರಬೇಕು. ಆದಾಯ ಸಂಗ್ರಹದ ಮಾನದಂಡದ ಆಧಾರದಲ್ಲಿ ಪಾಲಿಕೆಗಳನ್ನು ರಚನೆ ಮಾಡಬೇಕು. ಸಂಪೂರ್ಣ ಅಭಿವೃದ್ಧಿ ಹೊಂದಿರುವ ಗ್ರಾಮಗಳನ್ನು ಪಾಲಿಕೆಗೆ ಸೇರಿಸಬಹುದು ಎಂದೂ ಸಲಹೆ ನೀಡಿದ್ದೇವೆ’ ಎಂದರು. 

‘ಸಮಿತಿಯಲ್ಲಿರುವ ಬಿಜೆಪಿ ಸದಸ್ಯರೂ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಎಲ್ಲರೂ ವರದಿಗೆ ಸಹಿ ಮಾಡಿದ್ದಾರೆ. ಈ ಹಿಂದೆ ಮಂಡಿಸಿದ್ದ ಮಸೂದೆಯಲ್ಲಿ ಪಾಲಿಕೆ ವ್ಯಾಪ್ತಿಯ ಆದಾಯವು ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಬರುವ ಅಂಶ ಇತ್ತು. ಅದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಆಯಾ ಪಾಲಿಕೆಗೆ ನೇರವಾಗಿ ಆದಾಯ ಸಂದಾಯ ಆಗಬೇಕು ಎಂಬ ಬಿಜೆಪಿಯವರ ಸಲಹೆಯನ್ನು ಒಪ್ಪಿ ವರದಿಯಲ್ಲಿ ಶಿಫಾರಸು ಮಾಡಿದ್ದೇವೆ’ ಎಂದರು.

ವರದಿ ಸ್ವೀಕರಿಸಿ ಮಾತನಾಡಿದ ಸಭಾಧ್ಯಕ್ಷ ಯು.ಟಿ. ಖಾದರ್, ‘ಕಳೆದ ಜುಲೈ ತಿಂಗಳಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ ಮಂಡನೆ ಆಗಿತ್ತು.‌ ಮಸೂದೆಯ ಸಾಧಕ ಬಾಧಕಗಳ ಕುರಿತು ಚರ್ಚೆ ಆಗಬೇಕೆಂದು ಶಾಸಕರು ಒತ್ತಾಯಿಸಿದ ಕಾರಣ ಜಂಟಿ ಸಮಿತಿ ರಚನೆಗೆ ಮನವಿ ಮಾಡಿದ್ದರು. ಶಾಸಕ ರಿಜ್ವಾನ್ ಅರ್ಷದ್ ನೇತೃತ್ವದಲ್ಲಿ ಜಂಟಿ ಸಮಿತಿ ರಚನೆ ಮಾಡಲಾಗಿತ್ತು. ಸಮಿತಿಯು ವರದಿ ಸಲ್ಲಿಸಿದೆ. ಮುಂದಿನ ಅಧಿವೇಶನದಲ್ಲಿ ಈ ವರದಿಯನ್ನು ಮಂಡಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.