ಪ್ರಾತಿನಿಧಿಕ ಚಿತ್ರ
ಬೆಂಗಳೂರು: ‘ಯುವಕನನ್ನು ನಗ್ನಗೊಳಿಸಿ ಮೊಬೈಲ್ನಲ್ಲಿ ವಿಡಿಯೊ ಚಿತ್ರೀಕರಿಸಿ ಗೃಹ ಬಂಧನದಲ್ಲಿ ಇರಿಸಿದ್ದ’ ಆರೋಪದ ಅಡಿ ಹಾಸಿಗೆ ತಯಾರಿಕಾ ಮಳಿಗೆ ಮಾಲೀಕನಿಗೆ ನೋಟಿಸ್ ಜಾರಿ ಮಾಡಿರುವ ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು, ಖುದ್ದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
ಆಂಧ್ರಪ್ರದೇಶದ ಷರೀಫ್(22) ಹಲ್ಲೆಗೊಳಗಾದ ಯುವಕ.
ಈ ಸಂಬಂಧ ಷರೀಫ್ ಅವರ ದೂರದ ಸಂಬಂಧಿಯೂ ಆಗಿರುವ ಹಾಸಿಗೆ ತಯಾರಿಕಾ ಮಳಿಗೆ ಮಾಲೀಕ ಶಕ್ಷಾವಲಿಗೆ ನೋಟಿಸ್ ನೀಡಲಾಗಿದೆ ಎಂದು ಪೊಲೀಸರು ಹೇಳಿದರು.
ಸುಬ್ರಮಣ್ಯಪುರದ ಉತ್ತರಹಳ್ಳಿಯಲ್ಲಿ ಶಕ್ಷಾವಲಿ ಅವರು ಹಾಸಿಗೆ ತಯಾರಿಕಾ ಮಳಿಗೆ ನಡೆಸುತ್ತಿದ್ದಾರೆ. ಮಳಿಗೆಯಲ್ಲಿ ಷರೀಫ್ ಕೆಲಸ ಮಾಡುತ್ತಿದ್ದರು. ಒಂದು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದರು. ಇದರಿಂದ ಕೋಪಗೊಂಡಿದ್ದ ಶಕ್ಷಾವಲಿ ಅವರು ಷರೀಫ್ಗೆ ಕರೆ ಮಾಡಿ ನಿಂದಿಸಿದ್ದರು. ಆಗ ಸಿಟ್ಟಿಗೆದ್ದ ಷರೀಫ್ ಸಹ ನಿಂದಿಸಿದ್ದರು. ಇದರಿಂದ ಕೋಪಗೊಂಡ ಆರೋಪಿ, ಜುಲೈ 24ರಂದು ಷರೀಫ್ ಅವರು ಕೆಲಸ ಮಾಡುತ್ತಿದ್ದ ಸ್ಥಳಕ್ಕೇ ಹೊಗಿ ಹಲ್ಲೆ ನಡೆಸಿದ್ದಾರೆ. ಮನೆಗೆ ಕರೆ ತಂದಿದ್ಧಾರೆ. ಬಳಿಕ ಷರೀಫ್ನನ್ನು ನಗ್ನಗೊಳಿಸಿ ಹಲ್ಲೆ ನಡೆಸಿ, ವಿಡಿಯೊ ಮಾಡಿಕೊಂಡಿದ್ದರು. ಒಂದು ದಿನ ಗೃಹಬಂಧನದಲ್ಲಿ ಇರಿಸಿಕೊಂಡಿದ್ದರು ಎನ್ನಲಾಗಿದೆ.
ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದ ಬೆನ್ನಲ್ಲೇ ಷರೀಫ್ ಬಳಿ ದೂರು ಸ್ವೀಕರಿಸಿ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಯನ್ನು ವಿಚಾರಣೆಗೆ ಕರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.