ಬೆಂಗಳೂರು: ರಾಜ್ಯದ ಕೊಳೆಗೇರಿ ನಿವಾಸಿಗಳ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ನಲ್ಲಿ ಹಣ ಮೀಸಲಿಡಬೇಕು ಎಂದು ಸ್ಲಂ ಜನಾಂದೋಲನ ಕರ್ನಾಟಕ ನಿಯೋಗವು ವಸತಿ ಸಚಿವ ವಿ. ಸೋಮಣ್ಣ ಅವರಿಗೆ ಗುರುವಾರ ಮನವಿ ಸಲ್ಲಿಸಿತು.
‘ರಾಜ್ಯ ಸಚಿವ ಸಂಪುಟ ನಿರ್ಣಯದಂತೆ 1,873 ಕೊಳೆಗೇರಿಯ 3.12 ಲಕ್ಷ ಕುಟುಂಬಗಳಿಗೆ 6 ತಿಂಗಳಲ್ಲಿ ಹಕ್ಕುಪತ್ರ ನೀಡಿ, ಭೂ ಒಡೆತನ
ನೀಡಬೇಕು. ಕೊಳಚೆ ಪ್ರದೇಶದ ವಾಸಿಗಳು ವಾಣಿಜ್ಯ ಬ್ಯಾಂಕ್ಗಳಿಂದ ಸಾಲ ಪಡೆದು, ಸರ್ಕಾರಗಳ ಅನುದಾನ ಬಳಸಿಕೊಂಡು ಸ್ವತಃ ಮನೆ ನಿರ್ಮಿಸಿಕೊಳ್ಳಲು ಅಗತ್ಯವಿರುವ ಬೆಂಬಲವನ್ನು ರಾಜ್ಯ ಸರ್ಕಾರದಿಂದ ದೊರಕಿಸಿಕೊಡಬೇಕು’ ಎಂದು ಸಂಘಟನೆಯ ರಾಜ್ಯ ಸಂಚಾಲಕ ಎ. ನರಸಿಂಹಮೂರ್ತಿ ಕೋರಿದರು.
‘ಕೊಳೆಗೇರಿಗಳಲ್ಲಿ ಮೂಲಸೌಲಭ್ಯ ಕಲ್ಪಿಸಲು, ಫಲಾನುಭವಿ ಶುಲ್ಕ ಪಾವತಿಗಾಗಿ ₹500 ಕೋಟಿ, ಖಾಸಗಿ ಒಡೆತನದ ಕೊಳಚೆ
ಪ್ರದೇಶಗಳ ಭೂ ಸ್ವಾಧೀನಕ್ಕೆ ₹500 ಕೋಟಿ ಸೇರಿದಂತೆ ಒಟ್ಟು ₹1000 ಕೋಟಿ ಮೀಸಲಿಡಬೇಕು’ ಎಂದು ಅವರು ಮನವಿ ಮಾಡಿದರು.
‘ರಾಜ್ಯದ ಕೊಳೆಗೇರಿ ಜನರ ಬಹುದಿನಗಳ ಬೇಡಿಕೆಯನ್ನು ಸರ್ಕಾರ ಈಡೇರಿಸಿದೆ. ಹಕ್ಕುಪತ್ರ ನೀಡಲು 6 ತಿಂಗಳ ಗಡುವನ್ನು ಹಾಕಿಕೊಂಡಿದ್ದು ಅಗತ್ಯವಿರುವ ಹಣಕಾಸನ್ನು ಸಹ ಒದಗಿಸಲು ಸರ್ಕಾರ ಬದ್ಧವಾಗಿದೆ’ ಎಂದು ಸಚಿವ ವಿ. ಸೋಮಣ್ಣ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.