ಕೆ.ಆರ್.ಪುರ: ಸತತವಾಗಿ ಸುರಿಯುತ್ತಿರುವ ಮಳೆಯಿಂದ ಇಲ್ಲಿನ ನಿವಾಸಿಗಳು ಅಪಾರ್ಟ್ಮೆಂಟ್ ತೊರೆದು ಲಾಡ್ಜ್, ಹೋಟೆಲ್, ಪಿಜಿ ಹಾಗೂ ಸಂಬಂಧಿಕರ ಮನೆಗಳಿಗೆ ತೆರಳುತ್ತಿದ್ದಾರೆ.
ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಡಿಎನ್ಎ ಅಪಾರ್ಟ್ಮೆಂಟ್ಗೆ ಭೇಟಿ ನೀಡಿ, ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದರು. ಆದರೆ, ಸತತ ಮಳೆಯಿಂದ ಅಪಾರ್ಟ್ಮೆಂಟ್ ನುಗ್ಗಿದ ಮಳೆ ನೀರು ತಗ್ಗದೆ ಇಲ್ಲಿನ ಸಮಸ್ಯೆ ಬಗೆಹರಿದಿಲ್ಲ.
ನಲ್ಲೂರಹಳ್ಳಿಯ ಡಿಎನ್ಎ ಅಪಾರ್ಟ್ಮೆಂಟ್ನ ಶೇ 90 ನಿವಾಸಿಗಳು ಮನೆಗಳನ್ನು ತೊರೆದು ಬೇರಡೆ ಹೋಗಿದ್ದಾರೆ. ಎಡಬಿಡದೇ ಕಾಡುತ್ತಿರುವ ಮಳೆಯಿಂದ ನಿವಾಸಿಗಳು ಮುನ್ನೆಚ್ಚರಿಕೆ ಕ್ರಮವಾಗಿ ತಮ್ಮ ತಮ್ಮ ಊರುಗಳಿಗೆ ತೆರಳಿದಿದ್ದಾರೆ. ಕೆಲವರು ಲಾಡ್ಜ್, ತಮ್ಮ ನೆಂಟರುಗಳ ಮನೆಯಲ್ಲಿ ವಾಸ ಮಾಡಿ ಕೆಲಸ ಕಾರ್ಯಗಳಿಗಾಗಿ ತೆರಳುತ್ತಿದ್ದಾರೆ.
’ಅಪಾರ್ಟ್ಮೆಂಟ್ ಜಲಾವೃತಗೊಂಡಿರುವುದರಿಂದ ವಿದ್ಯುತ್ ಕಡಿತಗೊಂಡಿದೆ. ಅಪಾರ್ಟ್ಮೆಂಟ್ನಲ್ಲಿ ಕುಡಿಯುವ ನೀರು, ಮೂಲ ಸಮಸ್ಯೆಗಳು ಸಾಮಾನ್ಯವಾಗಿರುವುದರಿಂದ ಫ್ಲ್ಯಾಟ್ಗಳನ್ನು ತೊರೆದು ಬೇರೆ ಪ್ರದೇಶಗಳಲ್ಲಿ ನೆಲೆಸಿರುವ ಸಂಬಂಧಿಕರು ಹಾಗೂ ಸ್ನೇಹಿತರ ಮನೆಗಳಿಗೆ ತೆರಳುತ್ತಿದ್ದೇವೆ‘ ಎಂದು ನಿವಾಸಿ ಮಹೇಶ್ ಹೇಳಿದರು.
’ಇತ್ತೀಚಿಗೆ ಮಳೆಗೆ ಮಳೆಯ ಅವಾಂತರ ಕಂಡು ಅಧಿಕಾರಿಗಳು, ಶಾಸಕ ಸೇರಿ ಮುಖ್ಯಮಂತ್ರಿ ಭೇಟಿ ನೀಡಿ ಹೋದರೂ ಸಮಸ್ಯೆ ಬಗೆಹರಿದಿಲ್ಲ. ಅದರಿಂದ ಫ್ಲ್ಯಾಟ್ ತೊರೆಯುತ್ತಿದ್ದೇವೆ‘ ಎಂದು ಅಪಾರ್ಟ್ಮೆಂಟ್ ನಿವಾಸಿ ಸುರೇಂದ್ರ ಹೇಳಿದರು.
’ಸ್ಥಳದಲ್ಲೇ ಬೀಡುಬಿಟ್ಟಿದ್ದೇವೆ. ಸಹಜವಾಗಿ ಮಳೆ ಕಡಿಮೆಯಾಗದ ಹೊರತು ನಾವು ನೀರನ್ನು ಹೊರಹಾಕುವುದು ಕಷ್ಟ. ಕೆಲಸ ಕಾರ್ಯಗಳಿಗೆ ತೆರಳುವ ಜನರು, ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಮನೆಗಳಿಂದ ಹೊರಬರಲಾಗದ ಸ್ಥಿತಿಯಲ್ಲಿದ್ದು, ಅವರ ಮನೆಗಳ ಬಳಿಗೆ ಟ್ರ್ಯಾಕ್ಟರ್ ಮೂಲಕ ಊಟ ಸೇರಿ ಅಗತ್ಯ ವಸ್ತುಗಳನ್ನು ತಲುಪಿಸುವ ಕಾರ್ಯ ಮಾಡಲಾಗುತ್ತದೆ‘ ಎಂದು ಅಗ್ನಿಶಾಮಕ ಸಿಬ್ಬಂದಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.