ADVERTISEMENT

ಹಿಂದಿ ಹೇರಿಕೆಗೆ ಆಕ್ಷೇಪ; ಮಾತೃಭಾಷೆಗೆ ಆದ್ಯತೆ: ವೆಂಕಯ್ಯ ನಾಯ್ಡು

‘ರೇವಾ’ ಘಟಿಕೋತ್ಸವದಲ್ಲಿ ಮಾಜಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2022, 13:38 IST
Last Updated 9 ನವೆಂಬರ್ 2022, 13:38 IST
ವೆಂಕಯ್ಯ ನಾಯ್ಡು
ವೆಂಕಯ್ಯ ನಾಯ್ಡು    

ಬೆಂಗಳೂರು: ಬಲವಂತವಾಗಿ ಯಾರ ಮೇಲೂಹಿಂದಿಯನ್ನು ಹೇರಬಾರದು. ಮಾತೃ ಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ ಕಡ್ಡಾಯಗೊಳಿಸಬೇಕು ಎಂದುಮಾಜಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಪ್ರತಿಪಾದಿಸಿದರು.

ಪ್ರೀಮಿಯರ್ ಶಿಕ್ಷಣ ಸಂಸ್ಥೆಯ ‘ರೇವಾ’ ವಿಶ್ವವಿದ್ಯಾಲಯದ 7ನೇ ಘಟಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

‘ದೇಶದ ಜನರು ವಸಾಹತುಶಾಹಿ ಮನೋಸ್ಥಿತಿಯಿಂದ ಹೊರಬರಬೇಕು. ಶಿಕ್ಷಣ ವ್ಯವಸ್ಥೆಯನ್ನು ಭಾರತೀಕರಣಗೊಳಿಸಬೇಕು. ಮಕ್ಕಳಿಗೆ ನಮ್ಮ ಪೂರ್ವಜರ ಕಥೆಗಳನ್ನು ಹೇಳಬೇಕು. ಭಾರತೀಯ ಸಂಸ್ಕೃತಿಯ ಅರಿವು ಮೂಡಿಸಬೇಕು. ನಮ್ಮ ಪರಂಪರೆ ಸಂರಕ್ಷಿಸುವುದು ಯುವ ಪೀಳಿಗೆಯ ಕರ್ತವ್ಯ. ಶಿಕ್ಷಣ ಪದವಿಗಾಗಿ ಎಂದು ಭಾವಿಸದೆ, ಜ್ಞಾನೋದಯ, ವರ್ಧನೆ ಮತ್ತು ಸಬಲೀಕರಣಕ್ಕಾಗಿ ಎನ್ನುವ ಸತ್ಯ ಅರಿಯಬೇಕು.ಪ್ರಸ್ತುತ ಜಾರಿಗೆ ಬರುತ್ತಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಇಂತಹ ಎಲ್ಲ ಆಶಯಗಳನ್ನು ಸಹಕಾರಗೊಳಿಸುವ ನಿರೀಕ್ಷೆ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ರೇವಾ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಪಿ.ಶ್ಯಾಮ ರಾಜು, ಪದವಿಯ ಹಾದಿಯಲ್ಲಿ ವಿದ್ಯಾರ್ಥಿಗಳು ತೋರಿದ ದೃಢತೆ, ತಾಳ್ಮೆ ಮೆಚ್ಚುಗೆ ಪಾತ್ರವಾಗಿದೆ. ರೇವಾ ಕೀರ್ತಿ ಹೆಚ್ಚಿಸಿದ್ದಾರೆ. ವಿಶ್ವವಿದ್ಯಾಲಯ ಶಿಕ್ಷಣದ ಜತೆಗೆ, ಹಲವು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದೆ.ಸುಸ್ಥಿರ ಅಭಿವೃದ್ಧಿಗೆ ಕೊಡುಗೆ ನೀಡಿದೆ. ಹಳ್ಳಿಗಳನ್ನು ದತ್ತುಪಡೆಯುವ ಮೂಲಕ ಮಾದರಿ ಹೆಜ್ಜೆ ಇಟ್ಟಿದೆ. ಹವಾಮಾನ ವೈಪರೀತ್ಯ ತಡೆಗೆ ಹಸಿರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದು ಶ್ಲಾಘಿಸಿದರು.

ರಾಜ್ಯಪಾಲಥಾವರಚಂದ್ ಗೆಹಲೋತ್ ಘಟಿಕೋತ್ಸವಕ್ಕೆ ಚಾಲನೆ ನೀಡಿದರು.ಸಹ ಕುಲಪತಿ ಉಮೇಶ್‌ ಎಸ್‌.ರಾಜು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಕೈಮಗ್ಗದಿಂದ ತಯಾರಿಸಿದ ಬಟ್ಟೆಗಳನ್ನು ಧರಿಸಿ ಗಮನ ಸೆಳೆದರು.ವಿವಿಧ ವಿಭಾಗಗಳ 52 ವಿದ್ಯಾರ್ಥಿಗಳಿಗೆ ಚಿನ್ನದ ಪದಕ, 50 ವಿದ್ಯಾರ್ಥಿಗಳಿಗೆ ಪಿ.ಎಚ್‌ಡಿ, 3,487 ವಿದ್ಯಾರ್ಥಿಗಳಿಗೆ ಸ್ನಾತಕ ಪದವಿ,1,094 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಪ್ರದಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.