ಅಮಾನತು
ಬೆಂಗಳೂರು: ಎಲ್ಎಲ್ಬಿ ವಿದ್ಯಾರ್ಥಿ ರೇವಂತ್ ಅವರ ಕೊಲೆ ಪ್ರಕರಣದ ಸಂಬಂಧ ವರ್ತೂರು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಯೋಗಾನಂದ್ ಅವರನ್ನು ಅಮಾನತುಗೊಳಿಸಿ ನಗರ ಪೊಲೀಸ್ ಕಮಿಷನರ್ ಸೀಮಾಂತ್ಕುಮಾರ್ ಸಿಂಗ್ ಅವರು ಆದೇಶಿಸಿದ್ದಾರೆ. ಅಲ್ಲದೇ, ಪ್ರಕರಣದ ತನಿಖೆಯನ್ನು ಸಿಸಿಬಿಗೆ ವರ್ಗಾವಣೆ ಮಾಡಿದ್ದಾರೆ.
2024ರ ಸೆ.18ರಂದು ರೇವಂತ್ (24) ಅವರನ್ನು ತಮಿಳುನಾಡಿನ ಬಾಗಲೂರಿಗೆ ಕರೆದೊಯ್ದು ಕೊಲೆ ಮಾಡಲಾಗಿತ್ತು. ರೌಡಿ ರೇವಾ ಮತ್ತು ಸಹಚರರು ಕೊಲೆ ಪ್ರಕರಣದ ಆರೋಪಿಗಳು. ಕೃತ್ಯ ನಡೆದು ಒಂದೂವರೆ ವರ್ಷ ಆಗಿದ್ದರೂ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿಲ್ಲ. ನಿರ್ಲಕ್ಷ್ಯ ವಹಿಸಿದ ಆರೋಪದಡಿ ಯೋಗಾನಂದ್ ಅವರನ್ನು ಅಮಾನತು ಮಾಡಿ ಆದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
‘ಸ್ನೇಹಿತ ಸ್ಟಾಲಿನ್ ಮೇಲೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಲು ರೇವಂತ್ ಅವರು ಸಹಕರಿಸಿದ್ದರು. ದೂರು ವಾಪಸ್ ಪಡೆಯುವಂತೆ ರೇವಾ ತಂಡದವರು, ರೇವಂತ್ ಮೇಲೆ ಪದೇಪದೇ ಒತ್ತಡ ಹೇರಿದ್ದರು. ರಾಜಿ ಮಾಡಿಕೊಳ್ಳುವ ನೆಪದಲ್ಲಿ ಕರೆಸಿಕೊಂಡಿದ್ದ ದುಷ್ಕರ್ಮಿಗಳು, ರೇವಂತ್ ಅವರನ್ನು ಕೊಲೆ ಮಾಡಿದ್ದರು’ ಎಂದು ಮೂಲಗಳು ಹೇಳಿವೆ.
ತಮಿಳುನಾಡು ಪೊಲೀಸರಿಂದ ವರ್ಗಾವಣೆಯಾದ ಈ ಪ್ರಕರಣದ ತನಿಖೆ ನಡೆಸಿದ್ದ ವರ್ತೂರು ಪೊಲೀಸರು, ನಿಯಮದಂತೆ 90 ದಿನಗಳ ಒಳಗೆ ದೋಷಾರೋಪ ಪಟ್ಟಿ ಸಲ್ಲಿಸಿರಲಿಲ್ಲ. ಜೈಲಿನಲ್ಲಿದ್ದ ರೌಡಿಶೀಟರ್ ರೇವಾ ಸೇರಿದಂತೆ ಏಳು ಮಂದಿ ಆರೋಪಿಗಳು ಜಾಮೀನು ಪಡೆದು ಹೊರಬಂದಿದ್ದರು. ಜಾಮೀನಿನ ಮೇಲೆ ಹೊರಬಂದಿದ್ದ ರೌಡಿ ರೇವಾಗೆ ಪ್ರತಿದಿನ ಠಾಣೆಗೆ ಬಂದು ಸಹಿ ಹಾಕುವಂತೆ ನ್ಯಾಯಾಲಯ ಆದೇಶಿಸಿತ್ತು. ಆದರೆ, ರೇವಾ ಠಾಣೆಗೆ ಬರುತ್ತಿರಲಿಲ್ಲ. ಬದಲಾಗಿ, ಪೊಲೀಸರೇ ರೇವಾ ನೆಲಸಿದ್ದ ಸ್ಥಳಕ್ಕೆ ತೆರಳಿ ಸಹಿ ಮಾಡಿಸಿಕೊಂಡು ಬರುತ್ತಿದ್ದರು ಎಂಬ ಗಂಭೀರ ಆರೋಪವಿದೆ. ಈ ಸಂಬಂಧ ನಗರ ಪೊಲೀಸ್ ಕಮಿಷನರ್ ಸೀಮಾಂತ್ಕುಮಾರ್ ಅವರಿಗೆ ದೂರು ನೀಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.